ಇಂದು ರೋಷನ್ ಬೇಗ್ ಜಾಮೀನು ಅರ್ಜಿ ವಿಚಾರಣೆ – ಬೇಲ್ ಟೆನ್ಷನ್‍ನಲ್ಲಿ ರಾತ್ರಿ ಕಳೆದ ಮಾಜಿ ಸಚಿವ

ಬೆಂಗಳೂರು: ಐಎಂಎ ಜ್ಯುವೆಲ್ಸ್ ಬಹುಕೋಟಿ ಹಗರಣಕ್ಕೆ ಸಂಬಮಧಿಸಿದಂತೆ ಪರಪ್ಪನ ಅಗ್ರಹಾರ ಸೇರಿರುವ ಮಾಜಿ ಸಚಿವ ರೋಷನ್ ಬೇಗ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ತಮ್ಮ ವಕೀಲರ ಜೊತೆ ಬೇಗ್ ಮಾತುಕತೆ ನಡೆಸಿದ್ದಾರೆ. ಹೇಗಾದರು ಮಾಡಿ ಬೇಲ್ ಸಿಗಲೇ ಬೇಕು ಅಂತ ಮಾತುಕತೆ ವೇಳೆ ತಿಳಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇತ್ತ ಜಾಮೀನು ಟೆನ್ಷನ್ ನಲ್ಲಿಯೇ ರೋಷನ್ ಬೇಗ್ ದಿನ ಕಳೆದಿದ್ದು, ರೋಷನ್ ಪಾಲಿಗೆ ಇಂದು ಮಹತ್ವದ ದಿನವಾಗಲಿದೆ. ಬೇಲ್ ಸಿಗುತ್ತಾ ಅಥವಾ ಸಿಬಿಐ ವಶಕ್ಕೆ ಪಡೆದುಕೊಳ್ಳುತ್ತಾರಾ ಎಂದು ಆತಂಕಕ್ಕೊಳಗಾಗಿದ್ದಾರೆ. ಇಂದು ಜಾಮೀನು ಮಂಜೂರು ಮಾಡದಂತೆ ಸಿಬಿಐ ಆಕ್ಷೇಪಣೆ ಸಲ್ಲಿಕೆ ಮಾಡಲಿದೆ. ಜೊತೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ದಾಳಿಯ ಬಳಿಕ ಸಿಬಿಐ ದಾಖಲೆ ಪರಿಶೀಲನೆ ಮಾಡಿದೆ.

ಸದ್ಯ ಜೈಲಿನಲ್ಲಿನ ಊಟವನ್ನೇ ಸೇವಿಸುತ್ತಿರುವ ಬೇಗ್, ಇಂದು ಬುಧವಾರ ಅವಲಕ್ಕಿ ಚಿತ್ರನ್ನಾವನ್ನು ಸವಿಯಲಿದ್ದಾರೆ.

ಬಂಧನ ಯಾಕೆ?
ಈ ಹಿಂದೆ ಸಿಬಿಐ ಎರಡು ಬಾರಿ ನೋಟಿಸ್ ನೀಡಿ ರೋಷನ್ ಬೇಗ್ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಯಾವುದೇ ವಿಚಾರಣೆ ನಡೆಸಿರಲಿಲ್ಲ. ಈ ನಡುವೆ ಮನ್ಸೂರ್ ಖಾನ್ ನಾನು ರೋಷನ್ ಬೇಗ್ ಅವರಿಗೆ ಹಣ ನೀಡಿದ್ದೇನೆ. ಈ ಹಣವನ್ನು ರೋಷನ್ ಬೇಗ್ ಅವರಿಂದ ಪಡೆಯಲೇಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ಹಣವನ್ನು ಪಡೆಯದೇ ಇದ್ದರೆ ನಿಮ್ಮ ವಿರುದ್ಧವೇ ನ್ಯಾಯಾಧೀಶರಿಗೆ ದೂರು ನೀಡುತ್ತೇನೆ ಎಂದು ಮನ್ಸೂರ್ ಖಾನ್ ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ರೋಷನ್ ಬೇಗ್ ಅವರಿಗೆ ಮನ್ಸೂರ್ ಖಾನ್ 200 ಕೋಟಿ ಸೇರಿದಂತೆ ಐಷಾರಾಮಿ ಕಾರು, ಉಡುಗೊರೆ ನೀಡಿದ್ದ ಆರೋಪ ಈ ಪ್ರಕರಣ ಬೆಳಕಿಗೆ ಬಂದಾಗಲೇ ಬಂದಿತ್ತು. ಆದರೆ ಈಗ ಮನ್ಸೂರ್ ಖಾನ್ ಒತ್ತಡ ಹಾಕಿದ್ದ ಕಾರಣ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಮನೆಗೆ ತೆರಳಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮೂರು ದಿನಗಳ ಹಿಂದೆ ಸಂಜೆಯ ವೇಳೆ ಬಂಧಿಸಿದೆ.

Comments

Leave a Reply

Your email address will not be published. Required fields are marked *