ಇಂದು ಬೆಂಗಳೂರಲ್ಲೇ 24 ಮಂದಿ ಕೊರೊನಾಗೆ ಬಲಿ

ಬೆಂಗಳೂರು: ಸಿಲಿಕಾನ್ ಸಿಟಿಯ ಸ್ಥಿತಿ ದಿನದಿನಕ್ಕೆ ಘನಘೋರವಾಗುತ್ತಿದೆ. ದೆಹಲಿ, ಮುಂಬೈನಂತೆ ಬೆಂಗಳೂರು ಕೂಡ ಕೊರೊನಾ ಸಾವಿನ ಕೂಪವಾಗುತ್ತಾ ಅನ್ನೊ ಅನುಮಾನ ಶುರುವಾಗಿದೆ. ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ಬೆಂಗಳೂರೇ ಬಹುಪಾಲು ಪಡೆದಿದೆ. ಮಹಾನಗರಿ ಬೆಂಗಳೂರಲ್ಲಿ ಶತಕದಾಚೆಗೆ ಜಿಗಿದಿರೋ ಕೊರೊನಾ ಹೆಮ್ಮಾರಿ ಬರೋಬ್ಬರಿ 1,172 ಮಂದಿಗೆ ವಕ್ಕರಿಸಿದೆ. ಸಾವುಗಳ ಸಂಖ್ಯೆ ಸಹ ಎಲ್ಲಾ ದಾಖಲೆ ಮುರಿದಿದೆ. ಬೆಂಗಳೂರಲ್ಲಿಂದು 24 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾಗೆ ಹೆದರಿ ಜನ ಬೆಂಗಳೂರು ಬಿಡುತ್ತಿರುವಾಗಲೇ ಕೊರೊನಾ ಮತ್ತೆ ಶಾಕ್ ನೀಡಿದೆ.

ಈ ಮಹಾಮಾರಿ ವೈರಸ್ ಪೊಲೀಸರನ್ನ ಬೆನ್ನು ಬಿಡದೇ ಕಾಡುತ್ತಿದೆ. ಬೆಂಗಳೂರಿನ ಪೊಲೀಸರಿಗೆ ಆಘಾತದ ಮೇಲೆ ಆಘಾತ ನೀಡುತ್ತಿದೆ. ವಿವಿ ಪುರಂ ಠಾಣೆಯಲ್ಲಿ ಇವತ್ತು ಕೊರೊನಾ ಸ್ಫೋಟವೇ ಆಗಿದ್ದು, ಒಂದೇ ದಿನ ಎಂಟು ಮಂದಿಗೆ ತಗುಲಿದೆ. ಇಬ್ಬರು ಸಬ್‍ಇನ್‍ಸ್ಪೆಕ್ಟರ್, ಐವರು ಕಾನ್ ಸ್ಟೇಬಲ್ ಹಾಗೂ ಒಬ್ಬ ಹೋಂ ಗಾರ್ಡ್‍ಗೆ ಪಾಸಿಟಿವ್ ಬಂದಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಸ್ವ್ಯಾಬ್ ಕಲೆಕ್ಟ್ ಮಾಡಲಾಗಿದ್ದು, ಪೊಲೀಸರು ಭಯಭೀತರಾಗಿದ್ದಾರೆ. ಸದ್ಯ ವಿವಿ ಪುರಂ ಸ್ಟೇಷನ್‍ವೊಂದರಲ್ಲೇ 15 ಮಂದಿಗೆ ಸೋಂಕು ದೃಢವಾಗಿದೆ. ಸ್ಟೇಷನ್ ಸೀಲ್‍ಡೌನ್ ಆಗಿದೆ.

ಶಾಂತಿನಗರದ ನಮ್ಮ ಮೆಟ್ರೋದ ಓರ್ವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ಕಾಣಿಸಿಕೊಂಡ ಸಿಬ್ಬಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತನಿಗೆ ಸೋಂಕಿನ ಯಾವುದೇ ಲಕ್ಷಣ ಇರಲಿಲ್ಲ. ಹೀಗಾಗಿ ಸೋಮವಾರದವರೆಗೂ ನಮ್ಮ ಮೆಟ್ರೋದ ಕಚೇರಿ ಸೀಲ್‍ಡೌನ್ ಮಾಡಲಾಗಿದೆ.

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಕಟ್ಟು ನಿಟ್ಟಿನ ಸೀಲ್‍ಡೌನ್‍ಗೆ ಸರ್ಕಾರ ಪ್ಲಾನ್ ಮಾಡಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕೊರೊನಾ ಬ್ರೇಕ್ ಫೇಲ್ ಆಗಿದೆ. ಕೊರೊನಾ ಉಗ್ರರೂಪ ತಾಳಿದೆ. ಸೋಂಕಿತರ ಸಂಖ್ಯೆ ದಾಖಲೆ ಮಟ್ಟಕ್ಕೆ ಹೆಚ್ಚುವ ಜೊತೆಗೆ ಕೊರೊನಾ ಮರಣ ಮೃದಂಗವೂ ಜೋರಾಗಿದೆ. ಆದರೆ ಸೋಂಕಿತರ ಸಂಖ್ಯೆಗೆ ಹೋಲಿಸಿದ್ರೆ, ಚೇತರಿಕೆ ಪ್ರಮಾಣ ವಿಪರೀತವಾಗಿ ಕುಸಿಯುತ್ತಿದೆ. ಇವತ್ತು ಕೇವಲ ರಾಜ್ಯದ್ಯಂತ 439 ಮಂದಿ ಮಾತ್ರ ಡಿಸ್ಚಾರ್ಜ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *