ಇಂದು, ನಾಳೆ ಭಾರೀ ಮಳೆ – ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ

– ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ

ಬೆಂಗಳೂರು: ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ತೀವ್ರ ಕಟ್ಟೆಚ್ಚರ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಅವರು, ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಯ ಹಿನ್ನಲೆಯಲ್ಲಿ ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಇಂದು ಮತ್ತು ನಾಳೆ ಸಹ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಕಟ್ಟೆಚ್ಚರ ವಹಿಸಿ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಬಳಿಕ ರಣ ಮಳೆ ಈಗ ಬೆಂಗಳೂರನ್ನು ಅಟಕಾಯಿಸಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಚಿತ್ತಾ ಮಳೆ ತನ್ನ ಕುರುಡಾಟ ಪ್ರದರ್ಶಿಸುತ್ತಿದೆ. ಯಾವಾಗಂದ್ರೆ ಆಗ ಮಳೆ ಸುರಿದು ನಾನಾ ಅವಾಂತರ ಸೃಷ್ಟಿ ಮಾಡುತ್ತಿದೆ. ಕುರುಡ ಚಿತ್ತನ ಆಟಕ್ಕೆ ಬೆಂಗಳೂರು ಮಂದಿ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸೂರ್ಯ ದರ್ಶನ ಆಗಿರಲಿಲ್ಲ. ಮಧ್ಯಾಹ್ನದವರೆಗೂ ನಗರದಲ್ಲಿ ಮೋಡಗಳ ಆಟ ಜೋರಿತ್ತು. ಬಳಿಕ ನಗರದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯಿತು. ಸಂಜೆ ಮಳೆಗೆ ಬೆಂಗಳೂರಿನ ದಕ್ಷಿಣ ಭಾಗದ ಪರಿಸ್ಥಿತಿ ಭೀಕರವಾಗಿತ್ತು.

ಹೊಸಕೆರೆಹಳ್ಳಿ, ಬಸವನಗುಡಿ, ಕೆಂಗೇರಿ ಸೇರಿ ಹಲವು ಪ್ರದೇಶಗಳು ಹೈದರಾಬಾದ್‍ನ ಪ್ರವಾಹವನ್ನು ನೆನಪಿಸುಂತಾಯಿತು. ಬೋಟ್‍ಗಳಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದೆ. ನೂರಾರು ವಾಹನಗಳು ಆಟಿಕೆಗಳ ರೀತಿಯಲ್ಲಿ ಕೊಚ್ಚಿ ಹೋಗಿವೆ. ವಾಹನ ಸವಾರರು ದಿಕ್ಕೆಟ್ಟಿದ್ದಾರೆ. ನೂರಾರು ಮನೆಗಳು ಮುಳುಗಡೆ ಆಗಿವೆ. ಸಾವಿರಾರು ಜನ ಜಲ ದಿಗ್ಬಂಧನದಲ್ಲಿ ಸಿಲುಕಿದ್ದರು. ಇಂದು ನೀರಿನ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದ್ದು ಇಂದು ಸಹ ಮಳೆಯಾದರೆ ಗತಿ ಏನು ಎಂದು ಜನ ಚಿಂತೆಗೀಡಾಗಿದ್ದಾರೆ.

Comments

Leave a Reply

Your email address will not be published. Required fields are marked *