ಇಂಗ್ಲೆಂಡ್‍ನ ವಿಶ್ವ ಒಕ್ಕಲಿಗರ ಪರಿಷತ್‍ಗೆ ಡಿಸಿಎಂ ಚಾಲನೆ

ಬೆಂಗಳೂರು/ಲಂಡನ್: ಇಂಗ್ಲೆಂಡ್‍ನಲ್ಲಿ ನೆಲೆಸಿರುವ ಒಕ್ಕಲಿಗ ಸಮುದಾಯದವರು ಸ್ಥಾಪನೆ ಮಾಡಿರುವ ವಿಶ್ವ ಒಕ್ಕಲಿಗರ ಪರಿಷತ್ತನ್ನು ಶನಿವಾರ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಉದ್ಘಾಟಿಸಿದರು.

ವರ್ಚುಯಲ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದಲೇ ಪಾಲ್ಗೊಂಡ ಅವರು, ಉದ್ಘಾಟನಾ ಸಮಾರಂಭದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಉತ್ಸವಕ್ಕೂ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಇಂಗ್ಲೆಂಡ್ ಸೇರಿದಂತೆ ಜಗತ್ತಿನ ನಾನಾ ದೇಶಗಳಲ್ಲಿ ನೆಲೆಸಿರುವ ಒಕ್ಕಲಿಗ ಬಂಧುಗಳ ಸಾಧನೆಯಿಂದ ಸ್ವದೇಶದಲ್ಲಿರುವ ನಮಗೆಲ್ಲರಿಗೂ ಹೆಮ್ಮೆಯಾಗಿದೆ. ಹುಟ್ಟಿದ ನೆಲದಲ್ಲಿ ಉದ್ಯಮ ಸ್ಥಾಪಿಸುವುದೋ ಅಥವಾ ಯಾವುದಾದರೂ ಉಪಯುಕ್ತ ಯೋಜನೆ ಹಾಕಿಕೊಂಡರೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಕೃಷಿ ಮೂಲಕ ಅನ್ನ ನೀಡುವ ಒಕ್ಕಲಿಗರು ಎಲ್ಲರಿಗೂ ಆದರ್ಶವಾಗಿದ್ದಾರೆ. ಇಂಥ ಸಮುದಾಯದಲ್ಲೂ ಕಷ್ಟದಲ್ಲಿರುವವರು ಇದ್ದಾರೆ. ಅಂಥವರ ನೆರೆವಿಗೆ ತಾವು ಧಾವಿಸಬೇಕು. ಸಮುದಾಯವನ್ನು ಎಲ್ಲ ರೀತಿಯಲ್ಲೂ ಸಬಲೀಕರಣ ಮಾಡಬೇಕಿದೆ. ಅದಕ್ಕಾಗಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದು ಅನಿವಾಸಿ ಒಕ್ಕಲಿಗರಿಗೆ ಕರೆ ನೀಡಿದರು.

ಲಂಡನ್‍ನಲ್ಲಿ ವಿಶ್ವ ಒಕ್ಕಲಿಗರ ಪರಿಷತ್ತು ಸ್ಥಾಪನೆ ಅತ್ಯಂತ ಅರ್ಥಪೂರ್ಣ ಕೆಲಸವಾಗಿದೆ. ಈ ಮೂಲಕ ಭವಿಷ್ಯ ಅರಸಿಕೊಂಡು ಇಂಗ್ಲೆಂಡ್‍ಗೆ ಬರುವ ತಾಯ್ನಾಡಿನ ಪ್ರತಿಭೆಗಳಿಗೆ ಪರಿಷತ್ತು ನೆರವಾಗಲಿ ಎಂಬ ಆಶಯ ನನ್ನದು ಎಂದರು. ಬಿಜೆಪಿ ಮುಖಂಡರಾದ ಅಶ್ವತ್ಥ ನಾರಾಯಣ ಹಾಜರಿದ್ದರು.

Comments

Leave a Reply

Your email address will not be published. Required fields are marked *