ಆ.14 ರಂದು ಚಿಕ್ಕೋಡಿಯಲ್ಲಿ ಬೃಹತ್ ಲೋಕ ಅದಾಲತ್

ಚಿಕ್ಕೋಡಿ: ಆಗಸ್ಟ್ 14 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಬೃಹತ್ ಲೋಕ ಅದಾಲತ್ ನಡೆಯಲಿದೆ. ಈ ಲೋಕ ಅದಾಲತ್‍ನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಲ್ ಚವ್ಹಾಣ್ ಅವರು ಕರೆ ನೀಡಿದ್ದಾರೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಆಗಸ್ಟ್ 14 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಬೃಹತ್ ಲೋಕ ಅದಾಲತ್ ನಡೆಯಲಿದೆ.

ಈ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಚವ್ಹಾಣ್ ಅವರು, ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳು ನಡೆಯದೇ ಅನೇಕ ವ್ಯಾಜ್ಯಗಳು ಇತ್ಯರ್ಥ ಆಗದೇ ಉಳಿದುಕೊಂಡಿವೆ. ಹೀಗಾಗಿ ಲೋಕ ಅದಾಲತ್, ನೆನೆಗುದಿಗೆ ಬಿದ್ದಿರುವ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಲೋಕ ಅದಾಲತ್ ಮೂಲಕ ಸಾರ್ವಜನಿಕರು, ಕಕ್ಷಿದಾರರು, ಬ್ಯಾಂಕ್ ಮತ್ತು ವಿವಿಧ ಸಂಸ್ಥೆಗಳು ತಮ್ಮ ವ್ಯಾಜ್ಯಗಳಿಂದ ರಾಜೀಯಾಗಬಹುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದೇಶದ್ರೋಹ ಕಾನೂನು ಈಗಲೂ ಅಸ್ತಿತ್ವದಲ್ಲಿರಬೇಕೆ? – ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಲೋಕ ಅದಾಲತ್‍ನಲ್ಲಿ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಅಂದರೆ ಚೆಕ್ ಅಮಾನ್ಯ ಪ್ರಕರಣ, ವಾಹನ ಅಪಘಾತ ಪರಿಹಾರ, ಸಾಲ ವಸೂಲಾತಿ, ಕೌಟುಂಬಿಕ ಮತ್ತು ಜೀವನಾಂಶ (ವಿಚ್ಛೇದನ ಹೊರತುಪಡಿಸಿ) ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಪರಿಹಾರ ಪಡೆದುಕೊಳ್ಳಲು ಅದಾಲತ್ ಒಂದು ಸುವರ್ಣ ಅವಕಾಶ ಆಗಿರುತ್ತದೆ. ಸಾರ್ವಜನಿಕರು ಲೋಕ ಅದಾಲತ್ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಟಿ.ಶ್ರೀಕಾಂತ್, ವಿಜಯ ಕುಮಾರ್ ಬಾಗಡೆ, ಆಶೋಕ ಆರ್.ಎಚ್, ನಾಗರ ಪಾಟೀಲ್, ಸರಕಾರಿ ಅಭಿಯೋಜಕ ವೈ.ಜಿ.ತುಂಗಳ, ಎಜೆಪಿ ಆರ್.ಐ.ಖೋತ, ಎಲ್.ವಿ.ಬೋರನ್ನವರ ಭಾಗಿಯಾಗಿದ್ದರು.

Comments

Leave a Reply

Your email address will not be published. Required fields are marked *