ಆ್ಯಂಟಿಜೆನ್ ಟೆಸ್ಟ್‌ಗೆ ಹೆದರಿ ಮಾರುಕಟ್ಟೆಯನ್ನೇ ಬಂದ್ ಮಾಡಿದ ವ್ಯಾಪಾರಸ್ಥರು!

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಹಾವಳಿ ಜೋರಾಗುತ್ತಿದಂತೆ ಜಿಲ್ಲಾಡಳಿತ ಆ್ಯಂಟಿಜೆನ್ ಟೆಸ್ಟ್‍ಗೆ ಮುಂದಾಗಿದೆ. ನಗರದ ಜನನಿಬಿಡ ಪ್ರದೇಶ, ಮಾರುಕಟ್ಟೆಗಳಲ್ಲಿ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುತ್ತಿದೆ. ಆದರೆ ಈ ಟೆಸ್ಟ್ ಗೆ ಹೆದರಿ ಹುಬ್ಬಳ್ಳಿಯಲ್ಲಿ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡಿದ್ದಾರೆ.

ಹುಬ್ಬಳ್ಳಿಯ ದುರ್ಗದ ಬೈಲ್ ಸೇರಿದಂತೆ ಅವಳಿನಗರದ 15 ಕಡೆಗಳಲ್ಲಿ ಧಾರವಾಡ ಜಿಲ್ಲಾಡಳಿತ ಇಂದಿನಿಂದ ರ‍್ಯಾಪಿಡ್ ಟೆಸ್ಟ್ ಆರಂಭಿಸಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹುಬ್ಬಳ್ಳಿಯ ದುರ್ಗದ ಬೈಲ್ ಗೆ ಭೇಟಿ ನೀಡಿ ರ‍್ಯಾಪಿಡ್ ಟೆಸ್ಟ್ ಪರಿಶೀಲನೆ ನಡೆಸಿ, ವ್ಯಾಪ್ಯಾರಸ್ಥರು ಟೆಸ್ಟ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ರು. ಈ ವೇಳೆ 60ಕ್ಕೂ ಹೆಚ್ಚು ಮಂದಿಯ ಟೆಸ್ಟ್ ಮಾಡಿದ ನಂತರ 8 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರನ್ನು ಅಂಬುಲೆಲೆನ್ಸ್ ನಲ್ಲಿ ಚಿಕಿತ್ಸೆಗೆ ಸಿಬ್ಬಂದಿ ಕರೆದೊಯ್ದರು. ಅಲ್ಲದೇ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳು ಪಾಸಿಟಿವ್ ಬಂದ ವ್ಯಾಪಾರಸ್ಥರ ಅಂಗಡಿ-ಮುಂಗಟ್ಟುಗಳನ್ನು ಸೀಲ್‍ಡೌನ್ ಮಾಡಿದ್ದರು. ತಕ್ಷಣವೇ ಉಳಿದ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ದುರ್ಗದಬೈಲ್ ನಲ್ಲಿ ಟೆಸ್ಟ್ ವೇಳೆ 8 ಜನರಿಗೆ ಪಾಸಿಟಿವ್ ಬರುತ್ತಿದ್ದಂತೆ ಇಡೀ ಮಾರುಕಟ್ಟೆ ಸ್ತಬ್ಧವಾಯ್ತು. ಹೀಗಾಗಿ ಭಯಭೀತರಾದ ವ್ಯಾಪಾರಸ್ಥರು ಏಕಾಏಕಿ ಅಂಗಡಿಗಳನ್ನ ಬಂದ್ ಮಾಡಿ ಮನೆಗೆ ತೆರಳಿದರು. ಬೆಳಗ್ಗಿನಿಂದ ಜನರಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆ ಕೆಲ ಕ್ಷಣಗಳಲ್ಲಿಯೇ ಖಾಲಿ ಖಾಲಿಯಾಗಿ ಬಿಕೋ ಎನ್ನುವ ದೃಶ್ಯಗಳು ಕಂಡುಬಂದವು. ಅಲ್ಲದೇ ಟೆಸ್ಟ್ ಮಾಡಿಸಿಕೊಳ್ಳಲು ತಪ್ಪಿಸಿಕೊಳ್ಳಲು ಅಂಗಡಿ ಬಂದ್ ಮಾಡಿ ವ್ಯಾಪಾರಸ್ಥರು ಮನೆಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು.

Comments

Leave a Reply

Your email address will not be published. Required fields are marked *