ಆಸ್ತಿಯನ್ನು ನನ್ನ ಅಮ್ಮನಿಗೆ ಹಸ್ತಾಂತರಿಸಿ – ಹೆಣ್ಣು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

– ಆತ್ಮಹತ್ಯೆಗೂ ಮುನ್ನ ಸಾಕುನಾಯಿಗೂ ವಿಷವಿಕ್ಕಿದ್ರು
– ಡೆತ್‍ನೋಟ್ ನಲ್ಲಿ ಮಹಿಳೆ ಹೇಳಿದ್ದೇನು?

ಚೆನ್ನೈ: ಮನೆಯ ಯಜಮಾನನ ಸಾವಿನಿಂದ ಖಿನ್ನತೆಗೊಳಗಾಗಿದ್ದ ಕುಟುಂಬವೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮಧುರೈನಲ್ಲಿ ನಡೆದಿದೆ.

ಮೃತರನ್ನು ವಲಮರ್ತಿ(44) ಮಕ್ಕಳಾದ ಎ ಅಲಿಗಾ(20) ಹಾಗೂ ಎ ಪ್ರೀತಿ(17) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಇವರು ಸಾಕು ನಾಯಿಗೂ ವಿಷವಿಕ್ಕಿ ಕೊಂದಿದ್ದಾರೆ.

ವಲಮರ್ತಿ ಪತಿ ಅರುಣ್ ಪಂಡಿಯಾನ(44) ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕಟ್ಟಡದ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ತ್ರಿಚಿಯಿಂದ ಮಧುರೈಗೆ ಶಿಫ್ಟ್ ಆಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಅವರು ಮಧುರೈನಲ್ಲಿರುವ ಪತ್ನಿ ಸಹೋದರಿ ಮನೆಯಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅರುಣ್ ಜುಲೈ ತಿಂಗಳಿನಲ್ಲಿ ಮೃತಪಟ್ಟಿದ್ದರು.

ಪತಿಯ ಅಚಾನಕ್ ಸಾವಿನ ಬಳಿಕ ವಲಮರ್ತಿ ಬದುಕಿನ ಬಂಡಿ ಸಾಗಿಸಲು ಕಷ್ಟ ಪಡುತ್ತಿದ್ದು, ಖಿನ್ನತೆಗೆ ಜಾರಿದ್ದರು. ಇದೇ ಕಾರಣದಿಂದ ತನ್ನ ಮಕ್ಕಳಿಬ್ಬರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದರು.

ವಲಮರ್ತಿ ಸಹೋದರಿ ಸರಸ್ವತಿ ಮನೆಯ ಬಾಗಿಲು ತೆರೆಯುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ತಾಯಿ, ಇಬ್ಬರು ಮಕ್ಕಳು ಹಾಗೂ ನಾಯಿ ಶವ ನೆಲದ ಮೇಲೆ ಬಿದ್ದಿತ್ತು. ಮೃತರ ಫೋಟೋದ ಬಳಿ ಡೆತ್ ನೋಟ್ ಕೂಡ ಪತ್ತೆಯಾಗಿದೆ.

ತಮ್ಮ ಆಸ್ತಿಗಳನ್ನು ತಾಯಿ ಲಕ್ಷ್ಮಿಗೆ ಹಸ್ತಾಂತರಿಸಬೇಕಿದೆ. ಹೆಣ್ಣುಮಕ್ಕಳು ತಮ್ಮ ತಂದೆ ಇಲ್ಲದೆ ಬದುಕುವುದು ಕಷ್ಟ ಎಂದು ಹೇಳಿದರು. ಸಾಕು ನಾಯಿಯನ್ನು ತಮ್ಮ ಶವದೊಂದಿಗೆ ಹೂಳುವಂತೆ ವರಮತಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಧುರೈ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮಧುರೈ ಪೊಲೀಸರು ಬೇರೆ ಆಯಾಮಗಳಿಂದ ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *