RSS ನವರು ಕುರುಬರನ್ನು ವಿಭಜಿಸಲು ಈಶ್ವರಪ್ಪರನ್ನು ಬಳಸಿಕೊಳ್ತಿದ್ದಾರೆ: ಸಿದ್ದರಾಮಯ್ಯ

– ಈಶ್ವರಪ್ಪ ಕುರುಬ ನಾಯಕನಲ್ಲ

ಬೆಂಗಳೂರು: ಕುರುಬ ಸಮುದಾಯವನ್ನು ಒಡೆಯಲು ಸಚಿವ ಈಶ್ವರಪ್ಪ ಅವರನ್ನು ಆರ್‍ಎಸ್‍ಎಸ್‍ನವರು ಬಳಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಈಶ್ವರಪ್ಪ ಸಂವಿಧಾನ ಓದಿದ್ದಾರಾ, ಬಿಜೆಪಿಯವರು ಸಂವಿಧಾನ ಓದಲ್ಲ. ಬರೀ ಆರ್‍ಎಸ್‍ಎಸ್ ನವರು ಹೇಳಿದನ್ನ ಓದುತ್ತಾರೆ. ಕುರುಬರನ್ನು ಎಸ್‍ಟಿಗೆ ಸೇರಿಸುವ ಕುರಿತ ಹೋರಾಟಕ್ಕೆ ನನ್ನನ್ನು ಯಾರೂ ಕರೆದಿಲ್ಲ. ನಾನು ಬರುತ್ತೇನೆ ಎಂದೂ ಹೇಳಿಲ್ಲ. ಈಶ್ವರಪ್ಪ ಸುಳ್ಳು ಹೇಳಿದ್ದಾರೆ ಎಂದು ಹರಿಹಾಯ್ದರು.

ಈಶ್ವರಪ್ಪನವರ ಎಸ್.ಟಿ ಹೋರಾಟದ ಹಿಂದೆ ಆರ್‍ಎಸ್‍ಎಸ್ ಇದೆ. ಕುರುಬ ಸಮುದಾಯವನ್ನು ಒಡೆಯಲು ಹೀಗೆ ಮಾಡುತ್ತಿದ್ದಾರೆ. ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ. ಆರ್‍ಎಸ್‍ಎಸ್ ನವರು ದೇಶದಲ್ಲಿ ಯಾವಾಗ ಮೀಸಲಾತಿಗೆ ಸಪೋರ್ಟ್ ಮಾಡಿದ್ದಾರೆ? ಮಿಲ್ಲರ್ ಆಯೋಗ, ಮಂಡಲ್ ಕಮೀಷನ್, ಚಿನ್ನಪ್ಪ ರೆಡ್ಡಿ ಆಯೋಗ ಎಲ್ಲ ಸಂದರ್ಭದಲ್ಲೂ ಆರ್‍ಎಸ್‍ಎಸ್, ಬಿಜೆಪಿ ವಿರೋಧ ಮಾಡಿವೆ ಎಂದು ತಿಳಿಸಿದರು.

ಕುರುಬರ ನಾಯಕ ಎಂದು ನಾನೇ ಹೇಳಿಕೊಳ್ಳಲು ಆಗುವುದಿಲ್ಲ. ಹಣೆಗೆ ಪಟ್ಟಿ ಕಟ್ಟಿಕೊಂಡು ನಾನೇ ಕುರುಬರ ನಾಯಕ ಅನ್ನೋಕಾಗಲ್ಲ ರಾಜ್ಯದ ಜನ ಗುರುತಿಸಬೇಕು. ಈಶ್ವರಪ್ಪ ಅವರೇ ನಾಯಕ ಅಂದುಕೊಳ್ಳಲಿ. ಬರೀ ಎಸ್‍ಟಿಗೆ ಸೇರಿಸಿ ಎಂದು ಹೋರಾಟ ಮಾಡೋದಲ್ಲ, ಎಸ್‍ಟಿ ಮೀಸಲಾತಿ ಪ್ರಮಾಣ ಶೇ.20ರಷ್ಟು ಹೆಚ್ಚಳಕ್ಕೂ ಹೋರಾಟ ಮಾಡಬೇಕು. ಮೀಸಲಾತಿ ಬಗ್ಗೆ ಮಾತನಾಡುವವರು ಆರ್ಟಿಕಲ್ 15, 16, 29 ಹಾಗೂ 340 ಓದಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಈಶ್ವರಪ್ಪನವರಿಗೆ ಇದ್ದಕಿದ್ದಂಗೆ ಕುರುಬರ ಬಗ್ಗೆ ಕಾಳಜಿ ಬಂದಿದೆ. ಮಠ ಮಾಡುವಾಗ ಎಲ್ಲಿ ಹೋಗಿದ್ದರು, ಉದ್ಘಾಟನೆಗೂ ಬರಲಿಲ್ಲ. ಅಲ್ಲದೆ ಉಡುಪಿ ಮಠದಲ್ಲಿ ಕನಕನ ಕಿಂಡಿ ವಿವಾದ ಆದಾಗ ಈಶ್ವರಪ್ಪ ಎಲ್ಲಿ ಹೋಗಿದ್ದರು? ಇವಾಗ ಪಾದಯಾತ್ರೆ ಮಾಡುತ್ತೇನೆ ಎಂತಿದ್ದಾರೆ ಎಂದು ಹರಿಹಾಯ್ದರು.

ರಾಮ ಜೋಯಿಸ್ ರಾಜ್ಯಪಾಲರಾದವರು ಮಂಡಲ್ ಕಮೀಷನ್ ವರದಿ ಚಾಲೆಂಜ್ ಮಾಡಿದಾಗ ಈಶ್ವರಪ್ಪ ಎಲ್ಲಿ ಹೋಗಿದ್ದರು? ಹಿಂದುಳಿದವರಿಗೆ ಅನ್ಯಾಯವಾಗುತ್ತದೆ ಎಂದು ಈಶ್ವರಪ್ಪ ಯಾಕೆ ಹೇಳಲಿಲ್ಲ. ಜನ ಮುಗ್ದರು ಎಸ್‍ಟಿಗೆ ಸೇರಿಸುತ್ತೇವೆ ಎಂದರೆ ಎಲ್ಲರೂ ಬರುತ್ತಾರೆ. ಈಶ್ವರಪ್ಪ ಕುರುಬ ಸಮುದಾಯದ ಪ್ರಭಾವಿ ನಾಯಕ ಅಲ್ಲ. ಅವರನ್ನು ನಾಯಕ ಎಂದು ಕರೆಯಬೇಡಿ. ಅವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎಲ್ಲಿ ಹೋಯ್ತು? ಇವರಿಗೆ ಸ್ವಂತ ಬುದ್ಧಿ ಇಲ್ಲ. ಇದರ ಹಿಂದೆ ಸಂತೋಷ್ ಹಾಗೂ ದತ್ತಾತ್ರೆಯ ಹೊಸಬಾಳೆ ಇದ್ದಾರೆ. ಈಶ್ವರಪ್ಪನವರಿಗೆ ಸ್ವಂತ ಬುದ್ಧಿ ಇಲ್ಲ. ಆರ್‍ಎಸ್‍ಎಸ್ ಹೇಳಿದಂತೆ ಕುರುಬ ಸಮುದಾಯವನ್ನು ಒಡೆಯುತ್ತಿದ್ದಾರೆ. ಇದಕ್ಕಾಗಿ ಈಶ್ವರಪ್ಪ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದರು.

 

Comments

Leave a Reply

Your email address will not be published. Required fields are marked *