ಆರ್ಥಿಕ ಚೇತರಿಕೆಗಾಗಿ ಕೇಂದ್ರದಿಂದ ಮತ್ತೊಂದು ಪ್ಯಾಕೇಜ್ ಘೋಷಣೆಗೆ ತಯಾರಿ

ನವದೆಹಲಿ: ದೇಶದ ಅರ್ಥ ವ್ಯವಸ್ಥೆಯ ಚೇತರಿಕೆಗಾಗಿ ಕೇಂದ್ರ ಸರ್ಕಾರ ಮತ್ತೊಂದು ಆರ್ಥಿಕ ಪ್ಯಾಕೇಜ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಆರ್ಥಿಕ ಪ್ಯಾಕೇಜ್ ಘೋಷಣೆ ಕುರಿತು ಹಣಕಾಸು ಇಲಾಖೆಯ ಕಾರ್ಯದರ್ಶಿ ಅಜಯ್ ಭೂಷನ್ ಪಾಂಡೆ ಸುಳಿವು ನೀಡಿದ್ದಾರೆ.

ಮಾಹಾಮಾರಿ ಕೊರೊನಾ ವೈರಸ್ ನಿಂದಾಗಿ ದೇಶದ ಯುವ ಜನತೆ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಸರ್ಕಾರ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಬಹುದು. ಈ ಸಂಬಂಧ ಸರ್ಕಾರ ಕೆಲಸ ಮಾಡುತ್ತಿದೆ. ತಳಮಟ್ಟದಿಂದ ಸರ್ಕಾರ ಪ್ರತಿಯೊಂದು ಅಂಶಗಳನ್ನ ಗಮನಿಸುತ್ತಿದೆ. ಯಾರಿಗೆ, ಯಾವಾಗ ಮತ್ತು ಯಾವ ವರ್ಗದವರಿಗೆ ಆರ್ಥಿಕ ಸಹಾಯವಿದೆ ಎಂಬುದರ ಬಗ್ಗೆ ಸರ್ಕಾರ ಎಲ್ಲ ಸಚಿವಾಲಯ, ಉದ್ಯಮಿ, ವ್ಯಾಪಾರಿ ಸಂಘಗಳು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದೆ. ಸಲಹೆಗಳನ್ನು ಆಧರಿಸಿ ಉತ್ತಮ ಪ್ಯಾಕೇಜ್ ನೀಡಲಾಗುವುದು ಎಂದು ಅಜಯ್ ಭೂಷನ್ ಪಾಂಡೆ ತಿಳಿಸಿದ್ದಾರೆ.

ದೇಶದ ಅರ್ಥವ್ಯವಸ್ಥೆ ಸಹಜ ಸ್ಥಿತಿಗೆ ಮರಳುತ್ತಿದೆ. ಅಕ್ಟೋಬರ್ ತಿಂಗಳ ಜಿಎಸ್‍ಟಿ ಸಂಗ್ರಹ 1,05,155 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಈ ತಿಂಗಳಿಗಿಂತ ಜಿಎಸ್‍ಟಿ ಆದಾಯ ಶೇ.10ರಷ್ಟು ಏರಿಕೆಯಾಗಿದೆ. ಇದರ ಜೊತೆ ರಫ್ತು ಮತ್ತು ಆಮದು ವ್ಯಾಪಾರಗಳಲ್ಲಿ ಅಭಿವೃದ್ಧಿ ಕಂಡಿದೆ ಎಂದು ಮಾಹಿತಿ ನೀಡಿದರು.

ಇ-ವೇ ಬಿಲ್, ಇ-ಚಾಲನ್ ಜಿಎಸ್‍ಟಿ ಸಂಗ್ರಹದಲ್ಲಿನ ಸುಧಾರಣೆಯ ಸೂಚನೆಯನ್ನ ನೀಡುತ್ತಿದೆ. ಭಾರತದ ಅರ್ಥವ್ಯವಸ್ಥೆಯೂ ಮೊದಲಿನ ಸ್ಥಿತಿಗೆ ಹಂತ ಹಂತವಾಗಿ ಮರಳುತ್ತಿದೆ. ಪ್ರಸಕ್ತ ವರ್ಷ ಅಂದ್ರೆ ಏಪ್ರಿಲ್ ನಿಂದ ಅಕ್ಟೋಬರ್ ವರೆಗಿನ ನೇರ ತೆರಿಗೆ ಸಂಗ್ರಹ ಕಳೆದ ಬಾರಿಗಿಂತ ಶೇ.22 ಕುಸಿತಗೊಂದು 4.95 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ ಎಂದು ಪಾಂಡೆ ತಿಳಿದರು.

Comments

Leave a Reply

Your email address will not be published. Required fields are marked *