ಆರೋಗ್ಯ ಸಚಿವ ಶ್ರೀರಾಮುಲು ಅಸಮಾಧಾನ ಸ್ಫೋಟ

ಬೆಂಗಳೂರು: ಸಹೋದ್ಯೋಗಿ ಸಚಿವರ ಹಸ್ತಕ್ಷೇಪದಿಂದ ಆರೋಗ್ಯ ಸಚಿವ ಶ್ರೀರಾಮುಲು ತೀವ್ರ ಅಸಮಾಧಾನಗೊಂಡಿದ್ದಾರೆ.

ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಯಡಿಯೂರಪ್ಪನವರ ಮುಂದೆ ಆಕ್ರೋಶ ಹೊರಹಾಕಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ನನ್ನ ಅಧ್ಯಕ್ಷತೆಯ ಕೊರೋನಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಚಿವರು, ಅಧಿಕಾರಿಗಳು ನನ್ನನ್ನು ಓವರ್‌ಟೇಕ್‌ ಮಾಡುತ್ತಿದ್ದಾರೆ. ನನಗೆ ಗೌರವ ಕೊಡ್ತಿಲ್ಲ. ಯಾರು ನನ್ನ ಮಾತು ಕೇಳುತ್ತಿಲ್ಲ. ಹೀಗಾಗಿಯೇ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ನನಗೆ ಟಾಸ್ಕ್ ಫೋರ್ಸ್ ಅಧ್ಯಕ್ಷತೆ ಬೇಡ ಎಂದು ಸಿಎಂಗೆ ರಾಮುಲು ಹೇಳಿದ್ದಾರೆ.

ರಾಮುಲು ಮುನಿಸು, ಸಚಿವರ ಜಂಟಿ ಸುದ್ದಿಗೋಷ್ಠಿಯಲ್ಲಿಯೂ ಮುಂದುವರಿದಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರ 2 ಸಾವಿರ ಕೋಟಿ ಭ್ರಷ್ಟಾಚಾರ ಆರೋಪಕ್ಕೆ ಉತ್ತರ ನೀಡಲು 6 ಮಂದಿ ಸಚಿವರು ಇಂದು ಕುಳಿತ್ತಿದ್ದರು.

ಕಂದಾಯ ಸಚಿವ ಆರ್‌ ಅಶೋಕ್‌, ಉಪ ಮುಖ್ಯಮಂತ್ರಿ ಅಶ್ವಥ್‌ ನಾರಾಯಣ್‌, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಕೈ ನಾಯಕರ ಆರೋಪಗಳಿಗೆ ಉತ್ತರ ನೀಡಿದ್ದರು. ಈ ಸುದ್ದಿಗೋಷ್ಠಿಗೆ ಶ್ರೀರಾಮುಲು ಆಗಮಿಸಿದ್ದರೂ ತಮ್ಮ ಇಲಾಖೆಯ ಬಗ್ಗೆ ಯಾವುದೇ ಲೆಕ್ಕವನ್ನು ನೀಡಿಲ್ಲ. ವೆಂಟಿಲೇಟರ್‌ ಕುರಿತ ಆರೋಪಗಳಿಗೆ ಅಶೋಕ್‌, ಸುಧಾಕರ್‌, ಬೊಮ್ಮಾಯಿ ಉತ್ತರಿಸಿ ತಿರುಗೇಟು ನೀಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮುಲು ಮೌನಕ್ಕೆ ಶರಣಾಗಿದ್ದರಿಂದ ಅಸಮಾಧಾನ ಇದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿತ್ತು.

Comments

Leave a Reply

Your email address will not be published. Required fields are marked *