ಆರೋಗ್ಯ ಇಲಾಖೆಯಿಂದ ಎಡವಟ್ಟು – ಮೂಡಿಗೆರೆಯ ವೈದ್ಯನಿಗಿಲ್ಲ ಸೋಂಕು

ಚಿಕ್ಕಮಗಳೂರು/ ಮಂಡ್ಯ: ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಹೆಚ್ಚಾಗಿ ಜನರ ಜೀವ ಹಿಂಡುತ್ತಿರುವ ಹೊತ್ತಲ್ಲೇ ಆರೋಗ್ಯ ಇಲಾಖೆಯ ಕೆಲವು ಎಡವಟ್ಟುಗಳಿಂದ ಜನ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಿದ್ದಾರೆ.

ಮೊದಲು ಬೆಂಗಳೂರಿನ ಗರ್ಭಿಣಿ ಮತ್ತು ಪೇದೆ ವಿಚಾರದಲ್ಲಿ ತಪ್ಪು ರಿಪೋರ್ಟ್ ಕೊಟ್ಟು ಎಡವಟ್ಟು ಮಾಡಿತ್ತು. ಇದೀಗ ಅಂಥದ್ದೇ ಎಡವಟ್ಟುಗಳು ಮತ್ತೆ ರಿಪೀಟ್ ಆಗಿವೆ. ಮೂಡಿಗೆರೆ ಮತ್ತು ಮಂಡ್ಯದ ಬಾಲಕಿಯೊಬ್ಬಳ ರಿಪೋರ್ಟ್ ವಿಚಾರದಲ್ಲಿ ತಪ್ಪುಗಳು ಸಂಭವಿಸಿವೆ. ಇದರಿಂದಾಗಿ ನೂರಾರು ಮಂದಿ ತಮ್ಮದಲ್ಲದ ತಪ್ಪಿಗೆ ಸಂಕಷ್ಟ ಅನುಭವಿಸಿದ್ದಾರೆ.

ಎಡವಟ್ – 1
ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಯ 45 ವರ್ಷದ ವೈದ್ಯರಿಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿತ್ತು. ಈ ಪ್ರಕರಣ ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು. 1,295ನೇ ರೋಗಿಯಾಗಿದ್ದ ಈ ವ್ಯಕ್ತಿಯ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ 850 ಮಂದಿಯನ್ನು ಕ್ವಾರಟೈನ್ ಮಾಡಲಾಗಿತ್ತು. ಮತ್ತೆ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿದೆ. ಒಟ್ಟು 6 ಬಾರಿ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿದೆ.

ಎಡವಟ್ – 2
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‍ನಲ್ಲಿ 7ವರ್ಷದ ಮಂಡ್ಯದ ಬಾಲಕಿಗೆ ಕೊರೋನಾ ಬಂದಿದೆ. ಈಕೆಗೆ ಮುಂಬೈ ಪ್ರಯಾಣ ಹೊಂದಿದ್ದಳು ಎಂದು ಉಲ್ಲೇಖಿಸಲಾಗಿತ್ತು. ಆದರೆ ರೋಗಿ ಸಂಖ್ಯೆ 1,475 ಬಾಲಕಿ ಮುಂಬೈ ಹೋಗಿರಲಿಲ್ಲ. ಚಿನಕುರುಳಿ ಗ್ರಾಮದ ಈ 11 ವರ್ಷದ ಬಾಲಕಿ ಹೋಗಿದ್ದು ರಾಣೆಬೆನ್ನೂರಿಗೆ. ಯುಗಾದಿಗೂ ಮುನ್ನ ರಾಣೆಬೆನ್ನೂರಿಗೆ ತೆರಳಿದ್ದ ಬಾಲಕಿಯ ಕುಟುಂಬ ಕಳೆದ ವಾರ ಮಂಡ್ಯಕ್ಕೆ ಮರಳಿತ್ತು.

ಹೊರ ಜಿಲ್ಲೆಯಿಂದ ಬಂದ ಹಿನ್ನೆಲೆಯಲ್ಲಿ ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಎಲ್ಲ ಮಾಹಿತಿಗಳನ್ನು ತುಂಬಿ ಕಳುಹಿಸಲಾಗಿತ್ತು. ಆದರೆ ಹೆಲ್ತ್ ಬುಲೆಟಿನ್ ನಲ್ಲಿ ಟ್ರಾವೆಲ್ ಹಿಸ್ಟರಿ ಮತ್ತು ವಯಸ್ಸು ತಪ್ಪಾಗಿದೆ. ಅಷ್ಟೇ ಅಲ್ಲದೇ ಆಕೆಯ ಜೊತೆ ಸಂಪರ್ಕದಲ್ಲಿದ್ದ ಪೋಷಕರಿಗೆ ಯಾರಿಗೂ ಕೊರೊನಾ ಪಾಸಿಟಿವ್ ಬಂದಿಲ್ಲ. ಈಕೆಗೆ ಕೊರೊನಾ ಬಂದಿರುವ ಹಿನ್ನೆಲೆಯಲ್ಲಿ ಚಿನಕುರುಳಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.

ರಾಣೆಬೆನ್ನೂರು ಹಸಿರು ವಲಯದಲ್ಲಿದೆ. ಸೋಂಕು ಹೇಗೆ ಬಂದಿರಲು ಸಾಧ್ಯ? ಮತ್ತೊಮ್ಮೆ ಪರೀಕ್ಷೆ ನಡೆಸುವ ಮೂಲಕ ಸತ್ಯಾಸತ್ಯತೆ ಬಹಿರಂಗ ಪಡಿಸಿ ಎಂದು ಜಿಲ್ಲಾಡಳಿತಕ್ಕೆ ಶಾಸಕ ಪುಟ್ಟರಾಜು ಈಗ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *