ಆಟೋ ಚಾಲಕ ಕೊರೊನಾಗೆ ಬಲಿ- ಮಗಳಿಂದಲೇ ಅಂತ್ಯಕ್ರಿಯೆ

ಬೆಂಗಳೂರು: ಕೊರೊನಾಗೆ ಬಲಿಯಾದರೆ ಮೃತದೇಹವನ್ನು ಮನೆಯವರಿಗೆ ಆಸ್ಪತ್ರೆ ಸಿಬ್ಬಂದಿ ನೀಡಲ್ಲ. ಅಂತದ್ದರಲ್ಲಿ ಕೋವಿಡ್ ನಿಂದ ಮೃತಪಟ್ಟ ತನ್ನ ತಂದೆಯ ಅಂತ್ಯಕ್ರಿಯೆಯನ್ನು ಮಗಳೇ ಮುಂದೆ ನಿಂತು ಮಾಡಿಸಿದ ಮನಕಲಕುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಹೌದು. ಶಕ್ತಿಗಣಪತಿನಗರ ವಾರ್ಡ್-74ರಲ್ಲಿ ಆಟೋ ಚಾಲಕನಿಗೆ ಕೊರೊನಾ ವೈರಸ್ ದೃಢವಾಗಿತ್ತು. ಹೀಗಾಗಿ ಅವರು ನಗರದ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಇತ್ತ ಮನೆಯ ಯಜಮಾನನಿಗೆ ಕೊರೊನಾ ದೃಢವಾಗಿರುವುದರಿಂದ ಕುಟುಂಬದವರು ಹೋಂ ಕ್ವಾರಂಟೈನ್ ನಲ್ಲಿ ಇದ್ದರು. ಮೃತ ಆಟೋ ಚಾಲಕನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುಟ್ಟ ಮಗನಿದ್ದಾನೆ. ಹೀಗಾಗಿ ಮನೆಯ ಹಿರಿಯ ಮಗಳೇ ಬಿಬಿಎಂಪಿ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾಳೆ.

ಎಲ್ಲರೂ ಹೋಂ ಕ್ವಾರಂಟೈನ್ ನಲ್ಲಿದ್ದಿರಿಂದ ಅಪ್ಪನ ಆಂತ್ಯಕ್ರಿಯೆಯನ್ನು ನೆರವೇರಿಸಲು ಬರಲು ಸಾಧ್ಯವಾಗಲ್ಲ ಅಂದು ನೊಂದಿದ್ದ ಮಗಳು, ಅಪ್ಪನ ಕೊನೆಯ ಬಾರಿ ಮುಖ ನೋಡಲು ಪರದಾಡುತ್ತಿದ್ದಳು. ಕೊನೆಗೆ ಸ್ಥಳೀಯ ಕಾರ್ಪೋರೇಟರ್ ಎಂ ಶಿವರಾಜು ನೆರವಿನಿಂದ ಅಂತ್ಯಸಂಸ್ಕಾರ ನೇರವೇರುವ ಸುಮನ್ನಹಳ್ಳಿ ಚಿತಗಾರಕ್ಕೆ ಯುವತಿ ಬಂದಿದ್ದಾಳೆ. ಪಿಪಿಇ ಕಿಟ್ ಧರಿಸಿ ಕುಟುಂಬದಿಂದ 22 ವರ್ಷದ ಯುವತಿ ಒಬ್ಬಳೇ ಹಾಜರಾದಳು.

ತನ್ನ ತಂದೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಅಂತ್ಯಸಂಸ್ಕಾರವನ್ನು ಕೂಡ ನೋಡಲು ಸಾಧ್ಯ ಇಲ್ವೇನೋ ಅಂತ ಬೇಜಾರಾಗಿ ಅತ್ತಿದ್ದೆ. ಆದರೆ ಕೊನೆಗೂ ಅದಕ್ಕೆ ಅವಕಾಶ ಸಿಕ್ತು ಎಂದು ಯುವತಿ ಭಾವುಕಳಾಗಿ ಪಬ್ಲಿಕ್ ಟಿವಿಗೆ ಮಾತಾನಾಡಿದ್ದಾಳೆ.

Comments

Leave a Reply

Your email address will not be published. Required fields are marked *