ಆಕ್ಸಿಜನ್ ಕೊರತೆಯೇ ನಮ್ಮ ಮೇಜರ್ ಪ್ರಾಬ್ಲಂ: ಸಚಿವ ನಾರಾಯಣಗೌಡ

– ಇವತ್ತು ರಾತ್ರಿ, ನಾಳೆಗೆ ಕಷ್ಟವಿದೆ

ಮಂಡ್ಯ: ಆಕ್ಸಿಜನ್ ಕೊರತೆಯೇ ನಮ್ಮ ಮೇಜರ್ ಪ್ರಾಬ್ಲಂ. ಸದ್ಯ ಇವತ್ತು ಸಂಜೆಯವರೆಗೂ ಆಕ್ಸಿಜನ್ ಆಗಲಿದೆ. ಇವತ್ತು ರಾತ್ರಿ ಮತ್ತು ನಾಳೆಗೆ ಕಷ್ಟವಿದೆ. ಹಾಗಾಗಿ ನಾನೇ ಆಕ್ಸಿಜನ್ ಫಿಲ್ಲಿಂಗ್ ಕಂಪನಿಗೆ ಭೇಟಿ ನೀಡುತ್ತಿದ್ದೇನೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಆಕ್ಸಿಜನ್ ಎಲ್ಲಿಯೂ ಸಿಗುತ್ತಿಲ್ಲ. ಮೆಡಿಕಲ್ ಕಾಲೇಜಿನಲ್ಲಿ 150 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ರೋಗಿಗಳನ್ನ ಒಂದು ಕಡೆ ಶಿಫ್ಟ್ ಮಾಡಲಾಗಿದೆ. ತಾಲೂಕುಗಳಿಗೆ ಆಕ್ಸಿಜನ್ ಸಿಲಿಂಡರ್ ಗಳೇ ಹೋಗಬೇಕು. ದಿನಕ್ಕೆ 350 ರಿಂದ 400 ಸಿಲಿಂಡರ್ ಗಳ ಅವಶ್ಯಕತೆವಿದೆ. ಇದುವರೆಗೂ ಯಾವುದೇ ಸಮಸ್ಯೆ ಆಗಿಲ್ಲ. ಈಗ ಆಕ್ಸಿಜನ್ ಅಭಾವ ಕಾಣಿಸಿಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆಕ್ಸಿಜನ್ ಅಭಾವ ಹಿನ್ನೆಲೆ ನಾನೇ ಫ್ಯಾಕ್ಟರಿಗೆ ತೆರಳಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ತುಂಬಿ ಕಳುಹಿಸುವ ಕೆಲಸ ಮಾಡುತ್ತೇನೆ. ಇಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಬೇಕಾಗುತ್ತೆ ಅಂತ ಸರ್ಕಾರಕ್ಕೆ ಅಂದಾಜು ಇರಲಿಲ್ಲ. ಈಗ ಯಾರೇ ದಾಖಲಾದ್ರೂ ಆಕ್ಸಿಜನ್ ಕೇಳುತ್ತಾರೆ. ಗ್ರಾಮೀಣ ಭಾಗದ ಜನರು ಜ್ವರ ಬಂದ್ರೂ ಎಂಟರಿಂದ ಹತ್ತು ದಿನ ಅಲ್ಲೇ ಇರುತ್ತಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಆಸ್ಪತ್ರೆಗೆ ಬರುತ್ತಾರೆ. ಹಾಗಾಗಿ ಜಿಲ್ಲೆಯಲ್ಲಿ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸಾವಿರಕ್ಕೂ ಅಧಿಕ ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ವಸತಿ ನಿಲಯಗಳನ್ನ ಕೋವಿಡ್ ಕೇರ್ ಸೆಂಟರ್ ಗಳಾಗಿ ಬದಲಾಯಿಸಲಾಗಿದೆ. ಜಿಲ್ಲೆಯ ಕೊರೊನಾ ಸೋಂಕಿತರು ಅಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *