ಅಲ್ಲು ಅರ್ಜುನ್ ಭೇಟಿಯಾಗಿ ಕುತೂಹಲ ಮೂಡಿಸಿದ್ರು ಪ್ರಶಾಂತ್ ನೀಲ್..!

ಹೈದರಾಬಾದ್: ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇಂದು ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಭೇಟಿಯಾಗಿದ್ದಾರೆ. ಈ ಮೂಲಕ ಇದೀಗ ಕೆಜಿಎಫ್ ರೂವಾರಿ ಭಾರೀ ಕುತೂಹಲ ಹುಟ್ಟಿಸಿದ್ದಾರೆ.

ಹೌದು. ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಇಂದು ಹೈದಾರಾಬಾದ್ ನಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವಿಚಾರ ಇದೀಗ ಅಲ್ಲು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಪ್ರಶಾಂತ್ ನೀಲ್ ಅವರು ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಚಿತ್ರೀಕರಣದ ಬ್ಯುಸಿಯಲ್ಲಿದ್ದಾರೆ. ಈ ಮಧ್ಯೆ ಇಂದು ಸ್ವಲ್ಪ ಬಿಡುವು ಮಾಡಿಕೊಂಡು ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಪ್ರೊಡಕ್ಷನ್ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಆಗ ಪ್ರಶಾಂತ್ ನೀಲ್ ಅವರನ್ನು ಭೇಟಿಯಾಗಲು ಅಲ್ಲು ಕೂಡ ಆಫೀಸಿಗೆ ಬಂದಿದ್ದು, ಕೆಲ ಕಾಲ ಚರ್ಚೆ ನಡೆಸಿದ್ದಾರೆ.

ಕಚೇರಿ ಒಳಗಡೆ ಹೋಗುವ ಮೊದಲು ಅಲ್ಲು ಅರ್ಜುನ್ ಕ್ಯಾಮರಾಗೆ ಪೋಸ್ ನೀಡಿ ಹೋಗಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಶಾಂತ್ ನೀಲ್ ಅವರು ಅಲ್ಲು ಆಫೀಸಿಗೆ ತೆರಳಿ ಸಿನಿಮಾ ಸ್ಕ್ರಿಪ್ಟ್ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಭೇಟಿ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸಲಾರ್ ಬಳಿಕ ಪ್ರಶಾಂತ್ ನೀಲ್ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಾರಾ..? ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *