ಅನ್ಯ ಮಾರ್ಗದಲ್ಲಿ ಸಚಿವನಾಗೋದು ಆತ್ಮಸಾಕ್ಷಿಗೆ ವಿರುದ್ಧ: ರಾಮದಾಸ್

– ಮೈಸೂರು ಪ್ರಾಂತ್ಯಕ್ಕೆ ಅನ್ಯಾಯ

ಮೈಸೂರು: ನೂತನ ಸಚಿವರ ಹೆಸರು ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಮೈಸೂರು ಶಾಸಕ ಎಸ್.ಎ.ರಾಮದಾಸ್ ಸಹ ತಮ್ಮ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧವಾದದ್ದು ಎಂದು ಹೇಳುವ ಮೂಲಕ ಸಿ.ಪಿ.ಯೋಗೇಶ್ವರ್ ಆಯ್ಕೆಯ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

ನಾನು ಮೈಸೂರು ನಗರದ ಯುವಮೋರ್ಚಾ ಅಧ್ಯಕ್ಷನಾಗಿ ಪಕ್ಷದ ಕೆಲಸ ಪ್ರಾರಂಭ ಮಾಡಿದವನು. ರಾಜ್ಯದ ಬಿಜೆಪಿ ಯುವಮೋರ್ಚಾ ಅಧ್ಯಕ್ಷನಾಗಿ ಸತತ 2 ಬಾರಿ ಕೆಲಸ ಮಾಡಿದವನು. ಸತತ 28 ವರ್ಷಗಳಿಂದ ಸಾಕಷ್ಟು ನಿಷ್ಠೆಯಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ. ವಿಭಾಗದಲ್ಲಿ ಗೆದ್ದ 11 ಜನ ಬಿಜೆಪಿ ಶಾಸಕರಲ್ಲಿ 10 ಜನ ಪಕ್ಷ ಬಿಟ್ಟು ಅನ್ಯ ಪಕ್ಷಕ್ಕೆ ತೆರಳಿದರು.

ನಾನು ಪಕ್ಷದ ಶಾಸಕನಾಗಿ, ಪಕ್ಷ ನನ್ನ ತಾಯಿ, ಅದರ ಘನತೆ ನನ್ನ ಕರ್ತವ್ಯ ಎಂದು ಅರಿತವನು. ನಾನೊಬ್ಬ ನಿಜವಾದ ಸ್ವಯಂಸೇವಕ. ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧವಾದುದು. ಹಳೆಯ ಮೈಸೂರು ಪ್ರಾಂತ್ಯಕ್ಕೆ ಆದ ಅನ್ಯಾಯ.! ಜಿಲ್ಲೆಯ ಬೇರೆ ಯಾರನ್ನಾದರೂ ಮಂತ್ರಿ ಮಾಡಬಹುದಿತ್ತು ಎಂದು ಬೇಸರದ ನುಡಿಗಳನ್ನಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ಸಂಪುಟ ರಚನೆಯಾದ ವೇಳೆಯೂ ಸಚಿವ ಸ್ಥಾನ ಸಿಗದ್ದಕ್ಕೆ ರಾಮದಾಸ್ ತಮ್ಮ ಅಸಮಾಧಾನಿತರಾಗಿದ್ದರು.

ನೂತನ ಸಚಿವರು: ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ

Comments

Leave a Reply

Your email address will not be published. Required fields are marked *