ಅನುಕಂಪದ ಆಧಾರದಲ್ಲಿ ಕೆಲಸ ಪಡೆಯಲು ಕತ್ತು ಸೀಳಿ ತಂದೆಯನ್ನೇ ಕೊಂದ ಪಾಪಿ ಮಗ

– ನಿರುದ್ಯೋಗದಿಂದ ಬೇಸತ್ತಿದ್ದ ಆರೋಪಿ

ರಾಂಚಿ: ನಿರುದ್ಯೋಗದಿಂದ ಬೇಸತ್ತಿದ್ದ ಮಗ, ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತನ್ನ 55 ವರ್ಷದ ತಂದೆಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜಾರ್ಖಂಡ್‍ನ ರಾಮ್‍ಘರ್ ಜಿಲ್ಲೆಯಲ್ಲಿ ನಡೆದಿದೆ.

ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್(ಸಿಸಿಎಲ್)ನಲ್ಲಿ ಕೆಲಸ ಮಾಡುತ್ತಿದ್ದ 55 ವರ್ಷದ ತಂದೆ ಕೃಷ್ಣ ರಾಮ್ ಅವರನ್ನು ಮಗ ಕೊಲೆ ಮಾಡಿದ್ದಾನೆ. ಪಬ್ಲಿಕ್ ಸೆಕ್ಟರ್ ಅಂಡರ್‍ಟೇಕಿಂಗ್(ಪಿಎಸ್‍ಯು) ಕಂಪನಿಯಲ್ಲಿ ಕೆಲಸ ಪಡೆಯುವ ಸಲುವಾಗಿ ತನ್ನ ತಂದೆಯ ಗಂಟಲನ್ನು ಕೊಯ್ದು ಮಗನೇ ಹತ್ಯೆ ಮಾಡಿದ್ದಾನೆ.

ಮೃತ ಕೃಷ್ಣ ರಾಮ್ ಮುಖ್ಯ ಭದ್ರತಾ ಸಿಬ್ಬಂದಿಯಾಗಿದ್ದು, ರಾಮ್‍ಘರ್ ಜಿಲ್ಲೆಯ ಬಾರ್ಕಕಾನಾದ ಸಿಸಿಎಲ್‍ನ ಕೇಂದ್ರ ಕಾರ್ಯಾಗಾರದಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಹರಿತವಾದ ಆಯುಧದಿಂದ ತಂದೆಯ ಗಂಟಲನ್ನು ಸೀಳಿ ಮಗ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಉಪ ವಿಭಾಗೀಯ ಪೊಲೀಸ್ ಅಧಿಕಾರಿ(ಎಸ್‍ಡಿಪಿಒ) ಪ್ರಕಾಶ್ ಚಂದ್ರ ಮಹತೋ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನಿಡಿದ್ದು, ರಾಮ್ ಅವರ 35 ವರ್ಷದ ಮಗ ಬಾರ್ಕಕಾನಾ ಕ್ವಾಟ್ರಸ್‍ನಲ್ಲಿ ಬುಧವಾರ ರಾತ್ರಿ ಕತ್ತು ಸೀಳಿ ತಂದೆಯನ್ನು ಹತ್ಯೆ ಮಾಡಿದ್ದಾನೆ. ಘಟನಾ ಸ್ಥಳದಿಂದ ಸಂತ್ರಸ್ತನ ಮೊಬೈಲ್ ಫೋನ್ ಹಾಗೂ ಸಣ್ಣ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ರಾಮ್ ಅವರ ಹಿರಿಯ ಮಗ ತಪ್ಪೊಪ್ಪಿಕೊಂಡಿದ್ದು, ತಂದೆ ಸತ್ತ ಬಳಿಕ ಅನುಕಂಪದ ಆಧಾರ ಮೇರೆಗೆ ಸಿಸಿಎಲ್‍ನಲ್ಲಿ ಕೆಲಸ ಪಡೆಯಲು ತಂದೆಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಸಿಸಿಎಲ್‍ನ ನಿಬಂಧನೆ ಪ್ರಕಾರ, ನೌಕರ ತನ್ನ ಸೇವಾ ಅವಧಿಯಲ್ಲಿ ಸಾವನ್ನಪ್ಪಿದರೆ ಕನೂನು ಪ್ರಕಾರ ಅವಲಂಬಿತರಿಗೆ ಕೆಲಸ ನೀಡಲಾಗುತ್ತದೆ ಎಂದು ಪೊಲೀಸರು ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *