ಅದ್ಭುತ ಕ್ರಿಕೆಟಿಗನ ಜೊತೆ ಒಬ್ಬ ಶ್ರೇಷ್ಠ ನಾಯಕನೂ ನಿವೃತ್ತಿ – ಧೋನಿ ವಿದಾಯಕ್ಕೆ ಕಿಚ್ಚ ಬೇಸರ

– ಚಿತ್ರರಂಗದ ಹಲವಾರ ಕಲಾವಿದರಿಂದ ಧೋನಿಗೆ ಸಲಾಂ

ಬೆಂಗಳೂರು: ಅದ್ಭುತ ಕ್ರಿಕೆಟಿಗನ ಜೊತೆ ಒಬ್ಬ ಶ್ರೇಷ್ಠ ನಾಯಕನೂ ನಿವೃತ್ತಿಯಾಗಿದ್ದಾರೆ ಎಂದು ಕಿಚ್ಚ ಸುದೀಪ್ ಅವರು ಎಂಎಸ್ ಧೋನಿಯವರ ವಿದಾಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತಕ್ಕಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ತಂದ ಹೆಮ್ಮೆಯ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಶನಿವಾರ ಸಂಜೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಒಂದು ಸುಳಿವನ್ನು ನೀಡದೇ ಧೋನಿ ನಿವೃತ್ತಿ ಘೋಷಿಸಿದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ವಿದಾಯ ಪಂದ್ಯವನ್ನೂ ಆಡದೇ ಧೋನಿ ನಿವೃತ್ತಿ ಹೇಳಿರುವುದು ಸುದೀಪ್‌ಗೆ ಬೇಸರ ತಂದಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಿಚ್ಚ, ಅದ್ಭುತ ಕ್ರಿಕೆಟಿಗನ ಜೊತೆಗೆ, ಒಬ್ಬ ಶ್ರೇಷ್ಠ ನಾಯಕ ಹಠಾತ್ತನೆ ನಿವೃತ್ತಿಗೊಂಡಿದ್ದಾರೆ. ನನಗೆ ಅನಿಸುತ್ತದೆ ನಾವೆಲ್ಲರೂ ಅವರ ಕೊನೆಯ ಪಂದ್ಯವನ್ನೂ ನೋಡಬೇಕಿತ್ತು ಎಂದು. ಯಾರಿಗೂ ಕೂಡ ಅವರು ನಿವೃತ್ತಿ ಹೊಂದುತ್ತಾರೆ ಎಂದು ಗೊತ್ತೇ ಆಗಲಿಲ್ಲ. ಅವರ ಅಭಿಮಾನಿಗಳಿಗೆ ಅವರ ನಿವೃತ್ತಿ ವಿಚಾರ ಗೊತ್ತಿತ್ತು ಎಂದು ಭಾವಿಸುತ್ತೇನೆ. ಜೊತೆಗೆ ಅವರಿಗೆ ವಿದಾಯ ಪಂದ್ಯದ ಜೊತೆ ಅವರನ್ನು ಕಳುಹಿಸಿ ಕೊಡಬೇಕು ಎಂದು ಹೇಳುತ್ತೇನೆ ಎಂದು ಕಿಚ್ಚ ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರಂತೆ ಹಲವಾರ ಕನ್ನಡ ಚಿತ್ರರಂಗದ ಕಲಾವಿದರು ಧೋನಿಯವರ ನಿವೃತ್ತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಅಂತಯೇ ಕನ್ನಡ ನಟಿ ಪ್ರಣಿತಾ ಸುಭಾಷ್ ಅವರು ಕೂಡ ಪೋಸ್ಟ್ ಹಾಕಿಕೊಂಡಿದ್ದು, ಎಂಎಸ್ ಧೋನಿಯವರು ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದ್ದಾರೆ. ಕಳೆದ 16 ವರ್ಷದಿಂದ ನಮ್ಮೆಲ್ಲರ ಖುಷಿ ಮತ್ತು ಹೆಮ್ಮೆಯ ಮೂಲವಾಗಿದಕ್ಕೆ ಧನ್ಯವಾದಗಳು. ಈ ವಿಚಾರ ಬಹಳ ಕಠಿಣವಾದದ್ದು ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಕನ್ನಡ ನಿರ್ದೇಶಕ ತರುಣ್ ಸುಧೀರ್ ಅವರು ಟ್ವೀಟ್ ಮಾಡಿ, ನೀವು ನಮಗೆ ನಿಜವಾದ ಸ್ಫೂರ್ತಿ ಜೊತೆಗೆ ಉತ್ತಮ ನಾಯಕ. ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡಿದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಮತ್ತೊರ್ವ ನಿರ್ದೇಶಕ ಪವನ್ ಒಡೆಯರ್ ಅವರು ಕೂಡ ಟ್ವೀಟ್ ಮಾಡಿದ್ದು, ಧೋನಿ ಅಭಿಮಾನಿಗಳು ಎಂದು ಬಯಸದ ಕೊನೆಯ ದಿನ ಬಂದಿದೆ. ಆತ ನಿಜವಾದ ಚಾಂಪಿಯನ್ ಎಂದು ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *