ಅಡುಗೆ ಭಟ್ಟನಿಗೆ ಕೊರೊನಾ- ಬೆಳಗ್ಗೆ ಮದುವೆ, ಸಂಜೆ ನವಜೋಡಿ ಕ್ವಾರಂಟೈನ್

ತುಮಕೂರು: ದಿನೇ ದಿನೇ ಕೊರೊನಾ ತನ್ನ ಅಟ್ಟಹಾಸ ಮಿತಿಮೀರುತ್ತಿದೆ. ಮದುವೆ ಮನೆ ಅಡುಗೆ ಭಟ್ಟನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ. ಬೆಳಗ್ಗೆ ತಾನೇ ಮದುವೆ ಮುಗಿಸಿದ ನವಜೋಡಿ ಕೊರೊನಾದಿಂದ ಸಂಜೆ ವೇಳೆಗೆ ಕ್ವಾರಂಟೈನ್‍ನಲ್ಲಿ ಲಾಕ್ ಆಗಿದ್ದಾರೆ.

ಈ ಕೊರೊನಾ ಜಿಲ್ಲೆಯ ಗುಬ್ಬಿಯ ಹೇರೂರಿನ ನವ ಜೋಡಿಯೊಂದು ಕ್ವಾರಂಟೈನ್ ಸೇರುವಂತೆ ಮಾಡಿದೆ. ವಧುವರರಿಗೆ ಕೊರೊನಾ ಬಂದಿಲ್ಲ. ಬದಲಾಗಿ ಮದುವೆ ಮನೆಯಲ್ಲಿ ಅಡುಗೆ ಮಾಡಿದ್ದ ಅಡುಗೆ ಭಟ್ಟನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ನವ ಜೋಡಿ ಸೇರಿದಂತೆ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ.

ಹೇರೂರಿನ ವರ ಗಿರೀಶ್‍ಗೆ ಕಾಟೇನಹಳ್ಳಿಯ ವಧು ಮೀನಾಕ್ಷಿಯ ಜೊತೆ ವಿವಾಹವಾಗಿತ್ತು. ಹುಡುಗನ ಮನೆ ಆವರಣದಲ್ಲೇ ಮದುವೆ ನಡೆದಿದೆ. ಈ ಮದುವೆಗೆ ಅಡುಗೆ ಮಾಡಲು ಬಂದ ಭಟ್ಟ ಚಿಟ್ಟದ ಕುಪ್ಪೆ ನಿವಾಸಿ 50 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಜೂನ್ 14 ರಂದು ಈತ ಸ್ವಾಬ್ ಕೊಟ್ಟು ಬಂದಿದ್ದ. ರಿಪೋರ್ಟ್ ಬರುವವರೆಗೂ ಈತನನ್ನು ಅಧಿಕಾರಿಗಳು ಕ್ವಾರಂಟೈನ್‍ನಲ್ಲಿ ಇಡಬೇಕಿತ್ತು. ಆದರೆ ಈತ ಎಲ್ಲಾ ಕಡೆ ಓಡಾಡಿಕೊಂಡು ಅಡುಗೆ ಕೆಲಸ ಮಾಡಿಕೊಂಡಿದ್ದ.

ಜೂನ್ 18 ರಂದು ಅಡುಗೆ ಭಟ್ಟನ ಪಾಸಿಟಿವ್ ರಿಪೋರ್ಟ್ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಅಡುಗೆ ಭಟ್ಟ ಇದ್ದ ಮದುವೆ ಮನೆಗೆ ದಾಳಿ ಮಾಡಿದ್ದಾರೆ. ಅಡುಗೆ ಭಟ್ಟ, ವಧುವರರು, ಕ್ಯಾಮೆರಾಮನ್, ವಧು ಮತ್ತು ವರನ ಹತ್ತಿರ ಸಂಪರ್ಕ ಇದ್ದವರು ಸೇರಿ ಒಟ್ಟು 56 ಜನರನ್ನು ಕ್ವಾರಂಟೈನ್ ಮಾಡಿದ್ದಾರೆ ಎಂದು ವರನ ಸಂಬಂಧಿ ಪಾತರಾಜು ಹೇಳಿದ್ದಾರೆ.

ಅಂದಹಾಗೆ ಸೋಂಕಿತ ಅಡುಗೆ ಭಟ್ಟನ ಟ್ರಾವೆಲ್ ಹಿಸ್ಟರಿ ಏನೂ ಇಲ್ಲ. ಟಿ.ಬಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದ ಈತ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ಸೋಂಕು ಈತನಿಗೆ ಹರಡಿರಬಹುದು ಎಂದು ಶಂಕಿಸಲಾಗಿದೆ.

Comments

Leave a Reply

Your email address will not be published. Required fields are marked *