ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ವೃದ್ಧೆಯನ್ನು ಕೊಡಲಿಯಿಂದ ಹೊಡೆದು ಕೊಂದ ಯುವಕ

– ಸೊಸೆಯ ಅಕ್ರಮ ಸಂಬಂಧಕ್ಕೆ ಬಲಿಯಾದ ಅತ್ತೆ

ಮಂಡ್ಯ: ಸೊಸೆಯೊಂದಿಗಿನ ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದ ಅತ್ತೆಯನ್ನು ಯುವಕನೋರ್ವ ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಹುಣಸನಹಳ್ಳಿ ಗ್ರಾಮದ ದೊಡ್ಡತಾಯಮ್ಮ(55) ಕೊಲೆಯಾದ ವೃದ್ಧೆ. ದೊಡ್ಡತಾಯಮ್ಮ ತನ್ನ ಸೊಸೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದರ ಬಗ್ಗೆ ಅದೇ ಗ್ರಾಮದ ವಾಸು ಎಂಬ ಯುವಕನೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಬಳಿಕ ದೊಡ್ಡತಾಯಮ್ಮ ಮನೆಗೆ ಬಂದ ವೇಳೆ ವಾಸು ಹಿಂದಿನಿಂದ ಬಂದು ಕೊಡಲಿಯಿಂದ ದೊಡ್ಡತಾಯಮ್ಮರ ತಲೆ ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಬಳಿಕ ವಾಸು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ದೊಡ್ಡತಾಯಮ್ಮ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ್ದಾರೆ. ಇತ್ತ ಮನೆಗೆ ಬಂದ ದೊಡ್ಡತಾಯಮ್ಮ ಗಂಡ ಈಕೆಯನ್ನು ನೋಡಿ ತೊಡೆಯ ಮೇಲೆ ಕೂರಿಸಿಕೊಂಡು ನೀರು ಕುಡಿಸಿದ ನಂತರ ಪ್ರಾಣ ಹೋಗಿದೆ.

ಕಳೆದ ಏಳೆಂಟು ತಿಂಗಳುಗಳಿಂದ ದೊಡ್ಡತಾಯಮ್ಮ ಅವರ ಸೊಸೆ ಹಾಗೂ ವಾಸು ನಡುವೆ ಅಕ್ರಮ ಸಂಬಂಧ ಇತ್ತು ಎಂದು ಹೇಳಲಾಗುತ್ತಿತ್ತು. ಕಳೆದ ನಾಲ್ಕು ತಿಂಗಳ ಹಿಂದೆ ಇದೇ ಕಾರಣಕ್ಕೆ ದೊಡ್ಡತಾಯಮ್ಮಳ ಮಗ ಮತ್ತು ಸೊಸೆಯ ನಡುವೆ ಗಲಾಟೆಯಾಗಿತ್ತು. ಗಲಾಟೆಯಾದ ನಂತರ ಸೊಸೆ ತವರು ಮನೆ ಸೇರಿದ್ದಳು. ಸೊಸೆ ತವರು ಮನೆ ಸೇರಿ ತನ್ನ ಮಗನ ಬದುಕು ಹಾಳಾಗಲು ವಾಸುವೇ ಕಾರಣ ಎಂದು ದೊಡ್ಡತಾಯಮ್ಮ ವಾಸು ಜೊತೆಗೆ ಜಗಳವಾಡಿದ್ದಳು. ಇದೇ ಕಾರಣಕ್ಕೆ ವಾಸು ದೊಡ್ಡತಾಯಮ್ಮಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.

ಸದ್ಯ ಈ ಪ್ರಕರಣ ಕೆ ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪರಾರಿಯಾಗಿರುವ ವಾಸುವಿನ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *