ಅಕ್ರಮ ಮರಳುಗಾರಿಕೆಯಲ್ಲಿ ಎಂಎಲ್‍ಸಿ ಇಟಗಿ ಪುತ್ರ ಭಾಗಿ- 1.20 ಲಕ್ಷ ದಂಡ

– ಕೊಲೆಯತ್ನ ಆರೋಪ ಪ್ರಕರಣ ದಾಖಲು

ರಾಯಚೂರು: ವಿಧಾನಪರಿಷತ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರಾ ಅನ್ನೋ ಅನುಮಾನಗಳು ಈಗ ದಟ್ಟವಾಗಿವೆ. ಇಟಗಿ ಪುತ್ರ ಸುಮನ್ ರಾಯಲ್ಟಿಯಿಲ್ಲದೆ ಅಕ್ರಮ ಮರಳುಗಾರಿಕೆ ಮಾಡಿರುವುದಲ್ಲದೆ ಸ್ವಪಕ್ಷದ ಮುಖಂಡನ ಮೇಲೆ ಗೂಂಡಾಗಿರಿ ಮಾಡಿದ್ದಾನೆ. ಸುಮನ್ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವದುರ್ಗ ತಾಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶರಣಗೌಡ ಮಾಲಿಪಾಟೀಲ್ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಮರಳಿನ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆಸಿ ಕೊಲೆಯತ್ನ ಮಾಡಿದ್ದಾನೆ ಅಂದ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಸುಮನ್ ವಿರುದ್ಧ ದೂರು ದಾಖಲಾಗಿದೆ. ರಾಜಕೀಯ ವೈಷಮ್ಯದಿಂದ ಮದರಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹತ್ತಿರ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದಿದ್ದು ಚಾಲಕ ಪರಾರಿಯಾಗಿದ್ದಾನೆ. ಇದಕ್ಕೆ ಸುಮನ್ ಕಾರಣ ಅಂತ ಶರಣೆಗೌಡ ಆರೋಪಿಸಿದ್ದಾನೆ. ಚಾಲಕನ ಮೊಬೈಲ್ ಸ್ಥಳದಲ್ಲೇ ಬಿದ್ದಿದ್ದು ಮೊಬೈಲ್ ಗೆ ಕರೆ ಮಾಡಿದ ಸುಮನ್ ಕೊಲೆ ಮಾಡಲು ನಾನೇ ಹೇಳಿದ್ದೆ ಅಂತ ಮಾತನಾಡಿದ್ದಾನೆ. ಬಳಿಕ ಸ್ಥಳಕ್ಕೆ ಬಂದು ನೀನು ರಾಜಕೀಯವಾಗಿ ಬೆಳೆಯಬಾರದು ನೀನು ನಮಗೆ ಎದುರಾಗಿರುವೆ ನಿನ್ನನ್ನ ಪಕ್ಕಾ ಮುಗಿಸುವೆ ಅಂತ ಸುಮನ್ ಧಮ್ಕಿ ಹಾಕಿದ್ದಾನೆ ಅಂತ ಶರಣೇಗೌಡ ದೂರು ದಾಖಲಿಸಿದ್ದಾರೆ.

ರಾಯಲ್ಟಿ ಇಲ್ಲದೆ ಎರಡು ಟಿಪ್ಪರ್ ಮರಳನ್ನ ಸಾಗಣೆ ಮಾಡುತ್ತಿದ್ದು, ಇದೇ ಟಿಪ್ಪರ್ ನಿಂದ ಕಾರಿಗೆ ಡಿಕ್ಕಿ ಹೊಡೆಯಲಾಗಿದೆ. ಎಂಎಲ್ ಸಿ ಬಸವರಾಜ್ ಪಾಟೀಲ್ ಇಟಗಿ ಹಾಗೂ ಪುತ್ರ ಸುಮನ್ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಸಿದ್ದಾರಾ?? ಇದನ್ನ ಕಂಡೂ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ ಅನ್ನೋ ಪ್ರಶ್ನೆಗಳು ಎದುರಾಗಿವೆ. ಸದ್ಯ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಓವರ್ ಲೋಡ್ ಹಾಗೂ ರಾಯಲ್ಟಿ ಇಲ್ಲದೆ ಮರಳು ಸಾಗಿಸುತ್ತಿದ್ದದ್ದಕ್ಕೆ ಒಂದು ಲಾರಿಗೆ 1 ಲಕ್ಷ 20 ಸಾವಿರ ರೂಪಾಯಿ ದಂಡ ಹಾಕಿ ಬಿಟ್ಟಿದ್ದಾರೆ. ಅಪಘಾತ ಪ್ರಕರಣದಲ್ಲಿ ಇರುವ ಇನ್ನೊಂದು ಟಿಪ್ಪರ್ ನ್ನ ದೇವದುರ್ಗ ಪೊಲೀಸರು ಜಪ್ತಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *