ಅಕ್ರಮ ಮತದಾನ ಆರೋಪ ಅರ್ಜಿ ವಜಾ: ಪ್ರತಾಪ್ ಗೌಡ ಪಾಟೀಲ್ ನಿರಾಳ

ರಾಯಚೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಮತದಾನ ಮೂಲಕ ಗೆಲುವು ಸಾಧಿಸಿರುವ ಆರೋಪದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿರುವ ಹಿನ್ನೆಲೆ ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ನಿರಾಳರಾಗಿದ್ದಾರೆ.

ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ತೊಡಕಾಗಿದ್ದ ನ್ಯಾಯಾಲಯದ ಪ್ರಕರಣದಲ್ಲಿ ತೀರ್ಪು ಪ್ರತಾಪ್ ಗೌಡ ಪರ ಬಂದಿದೆ. ಕಾಂಗ್ರೆಸ್‍ನಿಂದ ಸ್ಪರ್ಧಿಸಿ ವಿಜೇತರಾಗಿದ್ದ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಪರಾಜಿತ ಬಿಜೆಪಿ ಅಭ್ಯರ್ಥಿ ಬಸನಗೌಡ ತುರವಿಹಾಳ ನ್ಯಾಯಾಲಯ ಮೆಟ್ಟಿಲು ಏರಿದ್ದರು. ಜನಪ್ರತಿನಿಧಿಗಳ ನ್ಯಾಯಾಲಯದದಲ್ಲಿದ್ದ ಪ್ರಕರಣದ ತೀರ್ಪು ಇಂದು ಪ್ರಕಟವಾಗಿದ್ದು, ದಾಖಲೆಗಳ ಕೊರತೆ ಹಿನ್ನೆಲೆ ವಿಚಾರಣಾ ಅರ್ಜಿ ವಜಾಗೊಳಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದಲ್ಲಿ ಸೋತಿದ್ದ ಬಸನಗೌಡ ತುರವಿಹಾಳ ಅಕ್ರಮ ಮತದಾನದ ಆರೋಪ ಮಾಡಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಶಾಸಕ ಸ್ಥಾನ ಬಿಟ್ಟು ಬಿಜೆಪಿಗೆ ಹಾರಿ ಬಂದರು. ಸದ್ಯ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿರುವ ಬಸನಗೌಡ ತುರವಿಹಾಳ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯಕ್ಕೆ ಪುನಃ ಮೊರೆ ಹೋಗಿದ್ದರು. ಆದ್ರೆ ನ್ಯಾಯಾಲಯ ಪ್ರಕರಣ ಮುಂದುವರೆಸಿ ಇಂದು ತೀರ್ಪು ಪ್ರಕಟಿಸಿದೆ.

ಈಗ ಆರೋಪದಿಂದ ಮುಕ್ತರಾಗಿರುವ ಪ್ರತಾಪ್ ಗೌಡ ಪಾಟೀಲ್ ಗೆ ಮುಂಬರುವ ಮಸ್ಕಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಹಾದಿ ಸುಲಭವಾಗಲಿದೆ. ಶಿರಾ ಉಪಚುನಾವಣೆ ವೇಳೆ ಮಸ್ಕಿ ಉಪಚುನಾವಣೆ ನಡೆಯುವ ಸಾಧ್ಯತೆಗಳಿವೆ.

Comments

Leave a Reply

Your email address will not be published. Required fields are marked *