ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಟ್ಟರೆ ನೀವೇ ಹೊಣೆ: ಅಧಿಕಾರಿಗೆ ಸುರೇಶ್ ಕುಮಾರ್ ವಾರ್ನಿಂಗ್

ಚಾಮರಾಜನಗರ: ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಾರದು. ಅಕ್ರಮ ಗಣಿಗಾರಿಕೆ ಕಂಡುಬಂದರೆ ನೀವೇ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

 

ಕೆಡಿಪಿ ಸಭೆಯಲ್ಲಿ ಭಾಗವಹಿಸಿದ ಸಚಿವರು ಅಕ್ರಮ ಗಣಿಗಾರಿಕೆಗೆ ಅವಕಾಶ ಇಲ್ಲ. ಜಿಲ್ಲೆಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಇರುವುದು ಕಂಡುಬಂದರೆ ನೀವೇ ಜವಬ್ದಾರರು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಲಕ್ಷ್ಮಮ್ಮಗೆ ಎಚ್ಚರಿಕೆ ನೀಡಿ, ಗಣಿಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು.

ಸಚಿವರು ನಿರ್ದೇಶನ ನೀಡುತ್ತಿದ್ದಂತೆ ಲಕ್ಷ್ಮಮ್ಮ ಶಿವಮೊಗ್ಗ ಘಟನೆಯ ದಿನವೇ 17 ಕ್ವಾರಿಗಳಿಗೆ ಭೇಟಿ ನೀಡಿದ್ದೇನೆ. ನಿನ್ನೆ ಮೊನ್ನೆ ಉಳಿದ ಕ್ವಾರಿಗಳಿಗೆ ಭೇಟಿ ನೀಡಿ ರಕ್ಷಣಾ ಕ್ರಮಗಳ ಬಗ್ಗೆ ಪರಿಶೀಲಿಸಿದ್ದೇವೆ. ಜಿಲ್ಲೆಯಲ್ಲಿ ಗ್ರಾನೈಟ್, ಬಿಳಿಕಲ್ಲು, ಕ್ರಷರ್, ಮರಳು ಸೇರಿದಂತೆ 75 ಕಡೆಗಳಲ್ಲಿ ಗಣಿಗಾರಿಕೆ ನಡೆಯುತ್ತಿವೆ ಎಂದು ಉತ್ತರಿಸಿದರು.

 

ಜಿಲ್ಲೆಯಲ್ಲಿ ಈ ಹಿಂದೆ ಅಕ್ರಮವಾಗಿ ನಡೆಯುತ್ತಿದ್ದ 17 ಕ್ವಾರಿಗಳನ್ನು ನಿಲ್ಲಿಸಿ ನೋಟಿಸ್ ನೀಡಲಾಗಿದೆ ಎಂದು ಲಕ್ಷ್ಮಮ್ಮ ತಿಳಿಸುತ್ತಿದ್ದಂತೆ, ಪ್ರಸ್ತುತ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲವೇ ಎಂದು ಹನೂರು ಶಾಸಕ ಆರ್ ನರೇಂದ್ರ ಮರು ಪ್ರಶ್ನಿಸಿದರು. ನಿಮಗೆ ಇಲ್ಲಿನ ಅಕ್ರಮ ಕ್ವಾರಿಗಳ ಬಗ್ಗೆ ಗೊತ್ತಿಲ್ಲದಿದ್ದರೆ ನನ್ನನ್ನು ಕೇಳಿ ಎಲ್ಲೆಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ತಿಳಿಸುತ್ತೇನೆ ಎಂದು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.

Comments

Leave a Reply

Your email address will not be published. Required fields are marked *