ಅಕ್ಕಾ ನಮ್ಮ ಕ್ಷೇತ್ರಕ್ಕೂ ಬನ್ನಿ, ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ: ಸುರೇಶ್‍ಗೌಡ

ಮಂಡ್ಯ: ನಮ್ಮ ಕ್ಷೇತ್ರದಲ್ಲೂ ಒಂದೆರಡು ಹೊರತುಪಡಿಸಿ ಉಳಿದೆಲ್ಲವೂ ಅಕ್ರಮ ಗಣಿಗಾರಿಕೆ. ಹೀಗಾಗಿ ಅಕ್ಕಾ ನಮ್ಮ ಕ್ಷೇತ್ರಕ್ಕೂ ಬನ್ನಿ, ನಾನೂ ನಿಮಗೆ ಸಹಕಾರ ನಿಡುತ್ತೇನೆ, ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ ಎಂದು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಜೆಡಿಎಸ್ ಶಾಸಕ ಸುರೇಶ್‍ಗೌಡ ಆಹ್ವಾನ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ತಡೆಯುವಂತೆ ಸುಮಲತಾ ಅವರನ್ನು ಆಹ್ವಾನಿಸುವ ಮೂಲಕ ವ್ಯಂಗ್ಯವಾಡಿದ್ದಾರೆ. ಶ್ರೀರಂಗಪಟ್ಟಣ ಹಾಗೂ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಮಾತನಾಡುತ್ತಿರುವ ಸಂಸದೆ ಸುಮಲತಾ ಅಂಬರೀಶ್ ನಾಗಮಂಗಲದ ಕ್ಷೇತ್ರದ ಕಡೆಯು ಸ್ವಲ್ಪ ಬರಬೇಕು‌. ಅಕ್ಕ ದಯಮಾಡಿ ನನ್ನ ಕ್ಷೇತ್ರ ನಾಗಮಂಗಲದಲ್ಲಿನ ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ. ನಾನು ಸ್ಥಳೀಯನಾಗಿರುವುದರಿಂದ ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ. ಹೀಗಾಗಿ ನೀವೇ ಬಂದು ನಿಲ್ಲಿಸಿಕೊಡಿ, ನಿಮಗೆ ನಾನೂ ಬೆಂಬಲ ನೀಡುತ್ತೇನೆ, ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?

ಸ್ವತಃ ನಾನೇ ಅಕ್ರಮ ಗಣಿಗಾರಿಕೆ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತೇನೆ. ಈ ಹಿಂದೆ ನಾನು ಆ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ವಿಧಾನ ಸಭೆ, ಕೆಡಿಪಿ ಸಭೆಗಳಲ್ಲಿ ಅಕ್ರಮ ಗಣಿಗಾರಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಯಡಿಯೂರಪ್ಪನವರೇ ಅಕ್ರಮವನ್ನು ಸಕ್ರಮ ಮಾಡಿ ಎಂದಿದ್ದಾರೆ. ನಾನು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಸಂಸದೆ ಅಕ್ಕ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಕ್ಕೆ ಧ್ವನಿಯಾಗಿದ್ದಾರೆ. ಅವರ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ, ಬಂದು ನಿಲ್ಲಿಸಲಿ. ನಾಗಮಂಗಲದಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆದರೆ ವೈಕ್ತಿಕವಾಗಿ ಕೃತಜ್ಞನಾಗಿರುತ್ತೇನೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *