ಅಂತ್ಯ ಸಂಸ್ಕಾರವಾದ ವಾರದ ಬಳಿಕ ಕೊರೊನಾ ವರದಿ- ಜನರ ಆಕ್ರೋಶ

ಚಿಕ್ಕಮಗಳೂರು: ಕೊರೊನಾ ಸೋಂಕಿತ ವ್ಯಕ್ತಿಗಳು ಸಾವನ್ನಪ್ಪಿ ಅವರ ಅಂತ್ಯ ಸಂಸ್ಕಾರವಾದ ವಾರದ ಬಳಿಕ ವರದಿಗಳು ಬರುತ್ತಿರುವುದರಿಂದ ಜಿಲ್ಲೆಯ ಜನ ಆತಂಕಕ್ಕೀಡಾಗಿ ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಎಂಟು ಹಾಗೂ ಆರು ದಿನಗಳ ಹಿಂದೆ ಸಾವನ್ನಪ್ಪಿದ ವ್ಯಕ್ತಿಗಳ ವರದಿ ತಡವಾಗಿ ಬಂದಿದ್ದು ಆರೋಗ್ಯ ಇಲಾಖೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಜುಲೈ 14ರಂದು ಕೊಪ್ಪ ಆಸ್ವತ್ರೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದ ಪಟ್ಟಣದ ಮೇಲಿನ ಪೇಟೆಯ 60 ವರ್ಷದ ವೃದ್ಧ ಅದೇ ದಿನ ಕಿಡ್ನಿ ಸಮಸ್ಯೆಯಿಂದ ಶಿವಮೊಗ್ಗದ ನಂಜಪ್ಪ ಆಸ್ವತ್ರೆಯಲ್ಲಿ ಮರಣ ಹೊಂದಿದ್ದರು. ಅವರ ಕೊರೊನಾ ಪರೀಕ್ಷೆ ವರದಿ 8 ದಿನದ ನಂತರ ಪಾಸಿಟಿವ್ ಬಂದಿತ್ತು. ಜೊತೆಗೆ ಬಿಂತ್ರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 70 ವರ್ಷದ ಮತ್ತೋರ್ವ ವೃದ್ಧ ಕೂಡ ಜುಲೈ 14ರಂದು ಕೊರೊನಾ ಪರೀಕ್ಷೆ ಮಾಡಿಸಿದ್ದರು. ಅವರು ಜುಲೈ 16ರಂದು ಸಾವನ್ನಪ್ಪಿದ್ದರು. ಆ ವೃದ್ಧ ಉಬ್ಬಸದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಕೊರೊನಾ ಪರೀಕ್ಷೆಯ ಅವರ ವರದಿಯು ಪಾಸಿಟಿವ್ ಬಂದಿತ್ತು. ಆದರೆ, ಇಬ್ಬರ ವರದಿಯೂ ಅಂತ್ಯ ಸಂಸ್ಕಾರವಾದ ವಾರದ ಬಳಿಜ ವರದಿ ಬಂದಿರೋದು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ಜನರಿಗೆ ಆತಂಕ ಎದುರಾಗಿದೆ.

ಇದೀಗ ಇಬ್ಬರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದವರನ್ನ ಪತ್ತೆ ಹಚ್ಚುವುದು ಆರೋಗ್ಯ ಇಲಾಖೆಗೆ ಸವಾಲಾಗಿದೆ. ಸಾವನ್ನಪ್ಪಿದ ವ್ಯಕ್ತಿಗಳಲ್ಲಿ ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಎದುರಾಗಿದೆ. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದವರು ಸ್ವಯಂ ಪ್ರೇರಿತವಾಗಿ ಬಂದು ಪರೀಕ್ಷೆಗೆ ಮುಂದಾಗಲಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದ 60 ವರ್ಷದ ವೃದ್ಧನ ಹೆಂಡತಿ ಹಾಗೂ ಮಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಕಳಸದಲ್ಲೂ ಒಂದೇ ಕುಟುಂಬದ 14 ಜನ ಕೊರೊನ ಪರೀಕ್ಷೆ ಮಾಡಿಸಿದ್ದರು. ನಾಲ್ವರ ವರದಿ ಬಂದಿದ್ದು, ಕೊರೊನಾ ಧೃಡಪಟ್ಟಿತ್ತು. ಉಳಿದ 10 ಜನರ ವರದಿ 15 ದಿನದ ಬಳಿಕ ಬಂದು 10 ಜನರಿಗೂ ಪಾಸಿಟಿವ್ ಬಂದಿತ್ತು. ಇದರಿಂದ ಕಳಸ ಜನ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಚಿಕ್ಕಮಗಳೂರು ಹಾಗೂ ಕಡೂರಿನಲ್ಲೂ ಇದೇ ರೀತಿ ಘಟನೆ ನಡೆದಿತ್ತು. ಇದರಿಂದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರೋ ಜನ ಸಾವಿನ ಪ್ರಕರಣದಲ್ಲಾದರೂ ಬೇಗ ವರದಿ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *