ಅಂತರರಾಜ್ಯ ಸೈಬರ್ ವಂಚಕರ ಸೆರೆ-24 ಬ್ಯಾಂಕ್ ಖಾತೆಗಳಿಂದ 2.61 ಲಕ್ಷ ರೂಪಾಯಿ ಜಪ್ತಿ

ಕಾರವಾರ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರನ್ನು ನಂಬಿಸಿ ಅವರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ರಾಜ್ಯ ಹಾಗೂ ಹೊರ ರಾಜ್ಯದ ಸೈಬರ್ ಕ್ರೈಂ ವಂಚಕರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿ, ವಂಚಕರಿಂದ 24 ವಿವಿಧ ಬ್ಯಾಂಕ್ ಖಾತೆಗಳಿಂದ 2.61 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಹೊನ್ನಾವರ ತಾಲೂಕಿನ ಗುಣವಂತೆಯ ನಿವಾಸಿ ನೇತ್ರಾವತಿ ಗೌಡಾ ಎನ್ನುವವರಿಗೆ ಅಮೆರಿಕಾದಲ್ಲಿ ಉದ್ಯೋಗ ನೀಡುವುದಾಗಿ ಇಮೇಲ್ ಕಳುಹಿಸಿ, ವಿವಿಧ ಸುಂಕದ ಹೆಸರಿನಲ್ಲಿ ಕರ್ನಾಟಕ, ತ್ರಿಪುರಾ, ಆಸ್ಸಾಂ, ತಮಿಳುನಾಡು, ಮಣಿಪುರ, ಗುಜರಾತ್, ದೆಹಲಿ ರಾಜ್ಯದಲ್ಲಿರುವ ತಮ್ಮ ಒಟ್ಟು 17 ಬ್ಯಾಂಕ್ ಖಾತೆಗಳಿಗೆ ನೇತ್ರಾವತಿ ಅವರಿಂದ 57,14,749 ರೂಪಾಯಿಯನ್ನು ವಂಚಕರು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು.

ತಾನು ವಂಚನೆಗೊಳಗಾದ ಕುರಿತು ಅರಿವಿಗೆ ಬಂದ ನಂತರ ನೇತ್ರಾವತಿ ಜಿಲ್ಲಾ ಸೈಬರ್ ಕ್ರೈಂ ಠಾಣೆಯಲ್ಲಿ ಫೆ.10 ರಂದು ದೂರು ನೀಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡ ಸಿಇಎನ್ ಅಪರಾಧ ಠಾಣೆಯ ಇನ್ಸ್‍ಪೆಕ್ಟರ್ ಸೀತಾರಾಮ.ಪಿ ರವರು ಬೆಂಗಳೂರಿನಲ್ಲಿ ನೆಲೆಸಿ ವಂಚನೆ ಮಾಡುತಿದ್ದ ಕೋಲಾರ ಮೂಲದ ಅಶೋಕ್ ಎಂ.ಎನ್, ಅಸ್ಸಾಂ ಮೂಲದ ಬುಲ್ಲಿಯಂಗಿರ್ ಹಲಾಮ್, ತ್ರಿಪುರ ಮೂಲದ ದರ್ತಿನ್ಬೀರ್ ಹಲಾಮ್, ಮಣಿಪುರ ಮೂಲದ ವೊರಿಂಗಮ್ ಫುಂಗ್ಶೋಕ್ ಎನ್ನುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಹಣ ವರ್ಗಾವಣೆ ಮಾಡಿಸಿಕೊಂಡ ಎಲ್ಲಾ ಬ್ಯಾಂಕ್ ಖಾತೆಗಳಿಂದ 2,61,528 ,ಹಣವನ್ನು ಲಾಕ್ ಮಾಡಿಸಿದ್ದು, ಬಂಧಿತರಿಂದ 24,000 ನಗದು, ಒಂದು ಸ್ವೈಪ್ ಮಶೀನ್, ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಥಂಬ್ ಮಶೀನ್, 24 ವಿವಿಧ ಬ್ಯಾಂಕ್ ಖಾತೆ, 24 ಎಟಿಎಂ ಕಾರ್ಡ್, 24 ಚೆಕ್ ಬುಕ್, 2 ಲ್ಯಾಪ್‍ಟಾಪ್, 23 ಮೊಬೈಲ್, 17 ಸಿಮ್, 1 ಟ್ಯಾಬ್, 2 ಪೆನ್‍ಡ್ರೈವ್, ಒಂದು ಡೊಂಗಲ್, ಒಂದು ವೈಫೈ ರೂಟರ್ ಮಶೀನ್ ವಶ ಪಡಿಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *