ʼಈಗಲೇ ತೆರವು ಮಾಡಬೇಡಿ, ಬೆಂಗಳೂರಿನಲ್ಲಿ ಲಾಕ್‌ಡೌನ್‌ ವಿಸ್ತರಿಸಿʼ: ತಜ್ಞರ ಸಲಹೆಗೆ ಕಾರಣಗಳು

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟಿದರೆ ಮತ್ತೆ ಲಾಕ್‍ಡೌನ್ ಮಾಡಬೇಕಾಗುತ್ತದೆ ಎಂದು 15 ದಿನಗಳ ಹಿಂದೆಯೇ ಕೊರೊನಾ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಈಗಲೂ ಕೂಡ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದು, ತಕ್ಷಣಕ್ಕೆ ಲಾಕ್‍ಡೌನ್ ತೆರವು ಬೇಡ ಬೇಡ ವಿಸ್ತರಿಸಿ ಎಂದಿದ್ದಾರೆ.

ತಜ್ಞರ ಸಲಹೆ ಏನು?
ದಿನದ ಸೋಂಕಿತರ ಸಂಖ್ಯೆ 2 ಸಾವಿರ ದಾಟಿದೆ. ಇಂತಹ ಸಂದರ್ಭಗಳಲ್ಲಿ ಮೈಮರೆಯಬಾರದು. ಈಗ ಲಾಕ್‍ಡೌನ್ ತೆರವು ಮಾಡಿದರೆ ಜುಲೈ ಅಂತ್ಯದಲ್ಲಿ ಕೇಸ್ ಡಬಲ್ ಆಗಲಿದೆ. ಬೆಂಗಳೂರಿನಲ್ಲಿ ಸಮುದಾಯಕ್ಕೆ ಹಬ್ಬಿರುವ ಬಗ್ಗೆ ನಾವು ಯಾವ ಅಧ್ಯಯನ ಮಾಡಿಲ್ಲ. ಸೋಂಕಿನ ವ್ಯಾಪ್ತಿ ಗೊತ್ತಿಲ್ಲದೇ ಏಕಾಏಕಿ ಲಾಕ್‍ಡೌನ್ ತೆರವು ಒಳ್ಳೆಯದಲ್ಲ ಎಂದು ಸಲಹೆ ನೀಡಿದ್ದಾರೆ.

196 ವಾರ್ಡ್‍ಗಳು ರೆಡ್ ಜೋನ್‍ನಲ್ಲಿದ್ದು, ಸಾವು ನೋವು ಹೆಚ್ಚಳ ಆಗಬಹುದು. ಇನ್ನೊಂದು ವಾರ ಲಾಕ್‍ಡೌನ್ ಮಾಡಿ ಪರೀಕ್ಷೆ ಹೆಚ್ಚಿಸಿಕೊಳ್ಳಿ. ವೈದ್ಯಕೀಯ ವ್ಯವಸ್ಥೆ ಬಲಪಡಿಸಿ ಹೈರಿಸ್ಕ್ ಕೇಸ್ ಪ್ರಮಾಣ 7 ಲಕ್ಷ ಇದ್ದು, ಲಾಕ್‍ಡೌನ್ ಅನಿವಾರ್ಯ ಎಂದು ಸಲಹೆ ನೀಡಿದ್ದಾರೆ.

ಬಿಬಿಎಂಪಿ ಆಯುಕ್ತರು, ಮೇಯರ್‌, ತಜ್ಞರು ಲಾಕ್‌ಡೌನ್‌ ವಿಸ್ತರಿಸಿ ಎಂದು ಹೇಳಿದರೂ ಸಿಎಂ ಆರ್ಥಿಕ ಕಾರಣಗಳನ್ನು ನೀಡಿ ಲಾಕ್‌ಡೌನ್‌ ವಿಸ್ತರಿಸುವುದಿಲ್ಲ ಎಂದು ಈಗಾಗಲೇ ಖಡಕ್‌ ಆಗಿ ತಮ್ಮ ನಿರ್ಧಾರ ತಿಳಿಸಿದ್ದಾರೆ. ಬೆಂಗಳೂರು ಕೋವಿಡ್‌ -19 ನಿಯಂತ್ರಣ ಸಂಬಂಧ ಕರೆಯಲಾದ ಸಭೆಯಲ್ಲಿ, ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಅಪಾಯಕಾರಿ ಪರಿಸ್ಥಿತಿ ನಿರ್ಮಾಣ ಆಗಿದೆ. ಕನಿಷ್ಠ ಪಕ್ಷ ಇನ್ನೊಂದು ವಾರವಾದರೂ ಲಾಕ್‍ಡೌನ್ ಮುಂದುವರಿಸಿ ಎಂದು ಕೆಲ ನಾಯಕರು ಸಭೆಯಲ್ಲಿ ಮನವಿ ಮಾಡಿದ್ದರು. ಒಂದು ವೇಳೆ ಬೆಂಗಳೂರಿನ ಎಲ್ಲಾ ಕಡೆ ಲಾಕ್‍ಡೌನ್ ಮಾಡಲು ಆಗದಿದ್ರೆ ಹಾಟ್‍ಸ್ಪಾಟ್‍ಗಳಲ್ಲಾದ್ರೂ ಲಾಕ್‍ಡೌನ್ ಮಾಡ್ಬೇಕು ಅಂತಾ ಅಭಿಪ್ರಾಯ ಮಂಡಿಸಿದ್ದರು.

ಈ ವೇಳೆ ಲಾಕ್‍ಡೌನ್ ಮುಂದುವರಿಕೆಗೆ ಒಲವು ತೋರದ ಸಿಎಂ, ಹಾಟ್‍ಸ್ಪಾಟ್‍ಗಳಲ್ಲಿ ಬೇಕಿದ್ದರೆ ಇನ್ನಷ್ಟು ಪೊಲೀಸ್ ಭದ್ರತೆ ಹೆಚ್ಚಿಸೋಣ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ. ಅಲ್ಲಿಯ ತನಕ ಗೊಂದಲ ಸೃಷ್ಟಿಸಬೇಡಿ ಎಂದು ಸಚಿವರಿಗೆ ಕಿವಿಮಾತು ಹೇಳಿದ್ದಾರೆ. ಇದೇ ವೇಳೆ, ಸೋಂಕಿತರಿಗೆ ಸರಿಯಾದ ಚಿಕಿತ್ಸೆ, ಬೆಡ್ ವ್ಯವಸ್ಥೆ, ಅಂಬುಲೆನ್ಸ್‌ ಇನ್ನೂ ಆಗದೇ ಇರುವುದಕ್ಕೆ ಸಿಟ್ಟಾಗಿದ್ದಾರೆ. ಆಗಲೇ ಮೂರು ದಿನ ಆಗೋಯ್ತು. ಇನ್ಯಾವಾಗ ಎಲ್ಲವನ್ನು ಸರಿ ಮಾಡ್ಕೊಳ್ಳೋದು ಅಂತಾ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಕೊರೊನಾ ತಡೆಗೆ ಕೆಲವೊಂದು ಸಲಹೆ ನೀಡಿ, ಇವು ಕೂಡಲೇ ಜಾರಿ ಜಾರಿಗೆ ಬರಬೇಕು ಅಂತಾ ಆದೇಶ ನೀಡಿದ್ದಾರೆ.

Comments

Leave a Reply

Your email address will not be published. Required fields are marked *